ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Monday 21 March 2016

ಮೌನ: ಕವಿತೆ?


ಅಂದುಕೊಂಡು ವರುಷವಾಗಿರಬೇಕು,
ಉಳಿಯುವ
ಕವಿತೆಯೊಂದನು ಬರೆಯಬೇಕೆಂದು,
ನಡುಗಡಲಲಿ ಉಕ್ಕುಕ್ಕಿ
ದಡ ಸೇರರುವುದರೊಳಗೆ ಶಾಂತವಾಗಬೇಕು,
ಮೊಗ್ಗೊಂದು ಹಿಗ್ಗಿ ಬಿಗಿಗೊಂಡು
ಕಳಚಿ ಬೀಳುವ ತವಕದಿ
ಅದನ್ನು ಕಚ್ಚಿಹಿಡಿದ ತೊಟ್ಟಿನ ಮೌನ?
ಕೇಳಬೇಕು ನೀವು,
ನಾನು ಕಿವಿಗೊಟ್ಟಿದ್ದೇನೆ...
ನಿಮಗೊಂದು ಕವಿತೆ ಬರೆದುಕೊಡುತ್ತೇನೆ,
ಇಂಕು ತುಂಬಿಕೊಡಿ!

ಎಲ್ಲಾ ಪದ್ಯಗಳಿಗೂ
ನಿಲುವಿರರಬೇಕು, ಏನನ್ನೊ ಹೇಳಬೇಕು,
ಏನನ್ನೋ ಅರ್ಥೈಸಬೇಕು,
ಬಿಡಿಸಿಡದ ಬಾಳೆ ಕಾವ್ಯ;
ದಕ್ಕಿಸಿಕೊಳ್ಳಬೇಕು...
ಕೈಯ ಸಂಧುಗಳಲ್ಲಿ ರಸ ಸುರಿಯುವ
ಮಾವಿನ ಹಣ್ಣುಗಳಂತೆ,
ಎಷ್ಟೆಷ್ಟು ವ್ಯಾಖ್ಯಾನ ಕಾವ್ಯಕ್ಕೆ?
ನನ್ನದು ಎದೆಯ ಹಾಡು,
ಕವಿತೆಯಾಗಬಲ್ಲುದೆ?
ಪ್ರಾಮಾಣಿಕೆತೆಯೊಂದಿದೆ,
ಲಯವಿಲ್ಲ, ಘಮವಿಲ್ಲ, ಓಘವಿದ್ದೀತು?
ಹಾಗೆಂದರೇನು?

ಮೊನ್ನೆಯೊಂದು ಕವಿತೆ ಓದುತ್ತಿದ್ದೆ,
ಆಫ್ರೋ ಅಮೇರಿಕನ್ನರು ಬರೆದುದ್ದನ್ನು
ಶ್ರೇಷ್ಟ ಕವಿತೆಗಳೆಂದು ಒಪ್ಪಿಕೊಳ್ಳಲಾಗದಂತೆ ಹೌದೇ?
ಆ ಕಪ್ಪು ಕವಿ ಅಂಗಲಾಚುತ್ತಾನೆ,
ಮನುಷ್ಯರನ್ನು ಗುಲಾಮರಂತೆ ಕಾಣದ
ಬಿಕಾರಿ ಸಮಾಧಿಯೊಳಗೆನ್ನ ಊಳಿರೆಂದು...
ಅದಕ್ಕೆಷ್ಟು ಕಿಮ್ಮತ್ತಿದ್ದೀತು?
ಆಳುವ ಜನರ ಬೂಟಿನ ಸದ್ದಿಗೆ
ಅವನದೊಂದು ಆರ್ತನಾದ ಕಿರುಚಾಟ ಬಿಡಿ,
ಸುಖದ ಸುಪ್ಪತ್ತಿಗೆಯೇರುವ ವಿಟನದು ಕಾವ್ಯ,
ವೇಶ್ಯೆ ಹಾದರದವಳು ಹಾಡಬಾರದು...
ಒತ್ತಿ ಹಿಡಿದ ಕೈಗಳು ಸಡಿಲಗೊಳ್ಳದು,
ಸರಳುಗಳು ಕಳಚಿಕೊಳ್ಳವು,
ಎಲ್ಲಿ ಹುಡುಕಲಿ
ನನ್ನ ಲೇಖನಿಗೆ ಇಂಕು?

ಮನುಷ್ಯ ನೆಲ ನೆನೆದಿದೆ
ರಕ್ತದ ಕಲೆಗಳಿವೆ,
ನನಗೆ ಅವುಗಳನ್ನೆಲ್ಲಾ ಬಿಡಿಸಿಬಿಡಬೇಕು,
ಭೂಮಿಯನ್ನು ತೊಳೆದುಬಿಡಬೇಕು,
ನೀರಿನಿಂದ ತೊಳೆದರೆ ತೊಳೆಯಬಹುದೆ?
ಹಾಲಿನಿಂದ ಕಳೆದರೆ ಕಳೆಯಬಹುದೆ?
ಗಂಜಲ ಪವಿತ್ರ, ಅದು ಆಗಬಹುದೆ?
ಅಮ್ಮಳುಣಿಸಿದ ಎದೆ ಹಾಲು
ನಂಜಾದ ಕತೆ ಕೇಳಿದ್ದೆ ನಿಜ ಹೌದೆ?
ಎಲ್ಲಿ ಹುಡುಕಲೋ ಶಿವನೇ,
ಹಾಳಾದ ಕವಿತೆಗೆ ಇಂಕು ಬೇಕು;
ನೀನು ಜಗದ ಕಣ್ಣಂತೆ,
ಖಾಲಿಯಾದ ಲೇಖನಿಗೆ
ಇಂಕು ತುಂಬಿಸದ ನೀನೆಷ್ಟರವನು?

ಮುಂದೆ ಬರೆದ ಒಂದೊಂದು
ಪದಗಳನೂ ಎಚ್ಚರಿಕೆ ನುಂಗುತಿದೆ,
ನಿದ್ರಾವಸ್ಥೆ; ನನಗೆ ನಾನೇ
ಆರೋಪಿಸಿಕೊಂಡು ಮಲಗಬೇಕು,
ಯೋಚನೆಗಳಿಗೆ ಕರ್ಫ್ಯೂ ಇದೆ,
ಗುಂಪುಗೂಡಬೇಡಿ ಭಾವಗಳೇ,
ಬರೆಯಲು ಇಂಕಿಲ್ಲ,
ಕೊಳ್ಳಲು ಕಸುವಿಲ್ಲ,
ಬತ್ತಿ ಸಾಯುವ ಮುನ್ನ,
ಎಲ್ಲಿಗಾದರು ಹೋಗಿ,
ಬಂಧನದಲ್ಲಿರುವ ಕೈದಿಯ
ಮನದೊಳಗೆಂತಹ ಕೆಲಸ?
ಕೋಲಾಹಲ ಸಾಕು ಹೊರಡಿ,
ಮೌನಕ್ಕೆ ಕಿವಿಗೊಟ್ಟಿದ್ದೆನೆಂದೆನಲ್ಲ
ಅದು ಮಾತನಾಡಲಿಲ್ಲ,
ಹಾಗೆಂದುಕೊಳ್ಳಿ ದಯವಿಟ್ಟು!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ