ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Thursday 5 May 2016

ಅವಳೊಲವೇ ಉಪಶಮನದ ಹಾದಿ!


ಉಪಶಮನದ ಹಾದಿ
ಪ್ರೇಮವೊಂದೇ ಎಂದ
ಬುದ್ಧ, ಬಸವ, ಗಾಂಧಿಯರು
ಪೂರ್ಣ ದಕ್ಕಿರಲೇ ಇಲ್ಲ,
ಅವಳೊಲವ ಭೋರ್ಗರೆತ
ನನ್ನೊಡಲ ತಣಿಸಿ,
ಎದೆಗಮೃತವ ಉಣಿಸುವವರೆಗೂ!

ಪ್ರೀತಿಯ ಗುಚ್ಛಕ್ಕೆ
ಮದುವೆಯ ರಂಗು ಬಳಿದು
ಅಂದ ನೋಡಿದ್ದೇ ನೆನಪು,
ಅವಳ ಕೈಯ ಮದರಂಗಿಯಿನ್ನೂ ಹಸಿ ಹಸಿ,
ತಾಳಿಯ ತುದಿ ಸೋಕಿದ್ದ
ನನ್ನ ಬೆರಳ ತುದಿಯ ಹರಿಶಿಣದ
ತೇವವಿನ್ನೂ ಎದೆಗೆ ಹಚ್ಚೆ ಬಿದ್ದಿದೆ,
ಅವಳ ಕೈಬಳೆಗಳ ಗಲಗಲ,
ಕಿರುಗೆಜ್ಜೆಯ ಇನಿದನಿ ಮಾರ್ದನಿ,
ಎಷ್ಟೆಲ್ಲವೂ ಸ್ಮೃತಿ ಪಟಲದೊಳಗೆ...

ಬಿಟ್ಟಿರಲಾಗದ ಸೆಳೆತದಿ
ನಾಳಿನ ಅಮಾವಾಸ್ಯೆಯ ಅಗಲಿಕೆ
ಭರಿಸಲಾಗುತ್ತಿಲ್ಲ,
ಏನು ಮಾಡಲಿ ಎಂದು ಅವಳನ್ನು ಕೇಳಿದೆ?
ಅವಳ ಕಣ್ಣಾಲಿಗಳು ಜಿನುಗಿ
ಎದೆ ತೋಯ್ಸಿದ ವಿರಹಕ್ಕೆ
ಅದೆಂತಹ ಉಪಶಮನವ ತರಲಿ?
ಅಗಲಿಕೆಯ ಕಾತರಕ್ಕದೆಂತಹ
ಮುಲಾಮು ಇದೆ ಹೇಳಿ?

--> ಮಂಜಿನ ಹನಿ

ಚಿತ್ರಕೃಪೆ: ನಮ್ ಎಂಗೇಜ್ಮೆಂಟ್ ಫೋಟೋಗ್ರಾಫರ್

Saturday 30 April 2016

ಹೊಸತನದ ಭಾವಗಳು!


ಈ ಮನೆಗೀಗಾಗಲೇ
ಐವತ್ತು ವರ್ಷ ಸಂದಿರಬಹುದು,
ನಡುಮನೆಯ ತೊಲೆಗಳಿಗೆ
ಅಜಾನುಬಾಹು ತಾತನ
ತೋಳುಗಳ ಆಧಾರ,
ಅದೋ ಅಲ್ಲಿ ನೋಡಿ
ಆ ಕಡೆಯ ಕೊಂಬೆಗೆ
ದೊಡ್ಡಪ್ಪನ ಉಸಿರು,
ಈ ಕಡೆಯ ಜಂತಿಗೆ ಅಪ್ಪಜಿಯ
ಜೀವದ ಜೀವದ ಕಸುವು!

ಇದರ ಇತಿಹಾಸ ದೊಡ್ಡದು.. ಬಗೆದಷ್ಟೂ
ಬದುಕೇ ಸಿಕ್ಕುತ್ತದೆ,
ಎಳೆ ವಯಸ್ಸಿಗೆ ಓಡಲು
ಶುರು ಮಾಡಿದ ನಾಲ್ಕು ಕಂದಮ್ಮಗಳ
ಬದುಕು, ಬವಣೆ, ತಬ್ಬಲಿತನಗಳು,
ನಿಟ್ಟುಸಿರು, ಹಸಿವು, ಅಳಲು,
ಎಷ್ಟೋ ಕಾಲ ಹೊಟ್ಟೆ ತಣ್ಣಗಿಟ್ಟ
ಹಿಟ್ಟು ಮತ್ತು ಬಸಿದ ಗಂಜಿ,
ಎಲ್ಲವನ್ನೂ ಇಂಗಿಕೊಂಡಿದೆ...
ಮತ್ತೆ ತಲೆ ಎತ್ತಿ ನಿಂತಿದೆ,
ಮುಂದೇನೆಂದು ತಿಳಿಯದಾದಾಗ
ಇಲ್ಲಿಗೆ ಬಂದು ನಿಲ್ಲುವುದು ಸೂಕ್ತ,
ಬಸವಳಿದು ಬಂದವನ ಬಿಗಿದಪ್ಪುವ
ಮಮತೆಯ ಭಾವವೊಂದು ಇಲ್ಲಿ ಅವ್ಯಕ್ತ!

ಇಷ್ಟು ಕಾಲ ಮುಗಿಲೆತ್ತರಕ್ಕೆ
ಕಾಣುತ್ತಿದ್ದವು,
ಹೆಂಚಿನ ಛಾವಣಿ, ಜಂತಿಗಳು, ರಿಪೀಸುಗಳು,
ಇಂದು ಭುಜಕ್ಕೊರಗುತ್ತಿರಬಹುದು,
ಸಂಚಿಯಿಸಿಕೊಂಡ ಶಕ್ತಿಯನ್ನು
ನೊಗಕ್ಕೆ ಕೊಡಬೇಕು;
ಮತ್ತೊಂದು ತಲೆಮಾರನ್ನು ಸ್ವಾಗತಿಸುವ ಕನಸಿಗೆ
ಮೈದಳೆದು ನಿಂತ ಮನೆಯ ಸಂಭ್ರಮ,
"ಮದುಮಗ ಒಬ್ಬೊಬ್ಬನೆ ಅಡ್ಡಾಡಬಾರದು ಮಗ.."
ಎಂದು ಕರೆದ ಅಜ್ಜಿ,
"ಹೂಂ..." ಎಂದು ಹೊರಗೆ ಹೊರಟ ನಾನು,
ತಲೆಮಾರುಗಳನ್ನು ಜಂಗಮವಾಗಿಸಿ
ತಾನು ಸ್ಥಾವರವಾಗಿ ನಿಂತಿದೆ,
ಸಂತನಾರೆಂಬ ಪ್ರಶ್ನೆಗೆ ಉತ್ತರವಿಲ್ಲ?

--> ಮಂಜಿನ ಹನಿ

ಚಿತ್ರಕೃಪೆ: ನಂದೇ ಫೋಟೋಗ್ರಫಿ

Monday 21 March 2016

ಮೌನ: ಕವಿತೆ?


ಅಂದುಕೊಂಡು ವರುಷವಾಗಿರಬೇಕು,
ಉಳಿಯುವ
ಕವಿತೆಯೊಂದನು ಬರೆಯಬೇಕೆಂದು,
ನಡುಗಡಲಲಿ ಉಕ್ಕುಕ್ಕಿ
ದಡ ಸೇರರುವುದರೊಳಗೆ ಶಾಂತವಾಗಬೇಕು,
ಮೊಗ್ಗೊಂದು ಹಿಗ್ಗಿ ಬಿಗಿಗೊಂಡು
ಕಳಚಿ ಬೀಳುವ ತವಕದಿ
ಅದನ್ನು ಕಚ್ಚಿಹಿಡಿದ ತೊಟ್ಟಿನ ಮೌನ?
ಕೇಳಬೇಕು ನೀವು,
ನಾನು ಕಿವಿಗೊಟ್ಟಿದ್ದೇನೆ...
ನಿಮಗೊಂದು ಕವಿತೆ ಬರೆದುಕೊಡುತ್ತೇನೆ,
ಇಂಕು ತುಂಬಿಕೊಡಿ!

ಎಲ್ಲಾ ಪದ್ಯಗಳಿಗೂ
ನಿಲುವಿರರಬೇಕು, ಏನನ್ನೊ ಹೇಳಬೇಕು,
ಏನನ್ನೋ ಅರ್ಥೈಸಬೇಕು,
ಬಿಡಿಸಿಡದ ಬಾಳೆ ಕಾವ್ಯ;
ದಕ್ಕಿಸಿಕೊಳ್ಳಬೇಕು...
ಕೈಯ ಸಂಧುಗಳಲ್ಲಿ ರಸ ಸುರಿಯುವ
ಮಾವಿನ ಹಣ್ಣುಗಳಂತೆ,
ಎಷ್ಟೆಷ್ಟು ವ್ಯಾಖ್ಯಾನ ಕಾವ್ಯಕ್ಕೆ?
ನನ್ನದು ಎದೆಯ ಹಾಡು,
ಕವಿತೆಯಾಗಬಲ್ಲುದೆ?
ಪ್ರಾಮಾಣಿಕೆತೆಯೊಂದಿದೆ,
ಲಯವಿಲ್ಲ, ಘಮವಿಲ್ಲ, ಓಘವಿದ್ದೀತು?
ಹಾಗೆಂದರೇನು?

ಮೊನ್ನೆಯೊಂದು ಕವಿತೆ ಓದುತ್ತಿದ್ದೆ,
ಆಫ್ರೋ ಅಮೇರಿಕನ್ನರು ಬರೆದುದ್ದನ್ನು
ಶ್ರೇಷ್ಟ ಕವಿತೆಗಳೆಂದು ಒಪ್ಪಿಕೊಳ್ಳಲಾಗದಂತೆ ಹೌದೇ?
ಆ ಕಪ್ಪು ಕವಿ ಅಂಗಲಾಚುತ್ತಾನೆ,
ಮನುಷ್ಯರನ್ನು ಗುಲಾಮರಂತೆ ಕಾಣದ
ಬಿಕಾರಿ ಸಮಾಧಿಯೊಳಗೆನ್ನ ಊಳಿರೆಂದು...
ಅದಕ್ಕೆಷ್ಟು ಕಿಮ್ಮತ್ತಿದ್ದೀತು?
ಆಳುವ ಜನರ ಬೂಟಿನ ಸದ್ದಿಗೆ
ಅವನದೊಂದು ಆರ್ತನಾದ ಕಿರುಚಾಟ ಬಿಡಿ,
ಸುಖದ ಸುಪ್ಪತ್ತಿಗೆಯೇರುವ ವಿಟನದು ಕಾವ್ಯ,
ವೇಶ್ಯೆ ಹಾದರದವಳು ಹಾಡಬಾರದು...
ಒತ್ತಿ ಹಿಡಿದ ಕೈಗಳು ಸಡಿಲಗೊಳ್ಳದು,
ಸರಳುಗಳು ಕಳಚಿಕೊಳ್ಳವು,
ಎಲ್ಲಿ ಹುಡುಕಲಿ
ನನ್ನ ಲೇಖನಿಗೆ ಇಂಕು?

ಮನುಷ್ಯ ನೆಲ ನೆನೆದಿದೆ
ರಕ್ತದ ಕಲೆಗಳಿವೆ,
ನನಗೆ ಅವುಗಳನ್ನೆಲ್ಲಾ ಬಿಡಿಸಿಬಿಡಬೇಕು,
ಭೂಮಿಯನ್ನು ತೊಳೆದುಬಿಡಬೇಕು,
ನೀರಿನಿಂದ ತೊಳೆದರೆ ತೊಳೆಯಬಹುದೆ?
ಹಾಲಿನಿಂದ ಕಳೆದರೆ ಕಳೆಯಬಹುದೆ?
ಗಂಜಲ ಪವಿತ್ರ, ಅದು ಆಗಬಹುದೆ?
ಅಮ್ಮಳುಣಿಸಿದ ಎದೆ ಹಾಲು
ನಂಜಾದ ಕತೆ ಕೇಳಿದ್ದೆ ನಿಜ ಹೌದೆ?
ಎಲ್ಲಿ ಹುಡುಕಲೋ ಶಿವನೇ,
ಹಾಳಾದ ಕವಿತೆಗೆ ಇಂಕು ಬೇಕು;
ನೀನು ಜಗದ ಕಣ್ಣಂತೆ,
ಖಾಲಿಯಾದ ಲೇಖನಿಗೆ
ಇಂಕು ತುಂಬಿಸದ ನೀನೆಷ್ಟರವನು?

ಮುಂದೆ ಬರೆದ ಒಂದೊಂದು
ಪದಗಳನೂ ಎಚ್ಚರಿಕೆ ನುಂಗುತಿದೆ,
ನಿದ್ರಾವಸ್ಥೆ; ನನಗೆ ನಾನೇ
ಆರೋಪಿಸಿಕೊಂಡು ಮಲಗಬೇಕು,
ಯೋಚನೆಗಳಿಗೆ ಕರ್ಫ್ಯೂ ಇದೆ,
ಗುಂಪುಗೂಡಬೇಡಿ ಭಾವಗಳೇ,
ಬರೆಯಲು ಇಂಕಿಲ್ಲ,
ಕೊಳ್ಳಲು ಕಸುವಿಲ್ಲ,
ಬತ್ತಿ ಸಾಯುವ ಮುನ್ನ,
ಎಲ್ಲಿಗಾದರು ಹೋಗಿ,
ಬಂಧನದಲ್ಲಿರುವ ಕೈದಿಯ
ಮನದೊಳಗೆಂತಹ ಕೆಲಸ?
ಕೋಲಾಹಲ ಸಾಕು ಹೊರಡಿ,
ಮೌನಕ್ಕೆ ಕಿವಿಗೊಟ್ಟಿದ್ದೆನೆಂದೆನಲ್ಲ
ಅದು ಮಾತನಾಡಲಿಲ್ಲ,
ಹಾಗೆಂದುಕೊಳ್ಳಿ ದಯವಿಟ್ಟು!

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

Thursday 28 January 2016

ಸೋಲೊಪ್ಪಿಕೊಂಡೆವು!


ನಿರಂತರ ಜೀತದ ಧ್ಯಾನಕ್ಕೆ ಮೈಯೊಡ್ಡಿಕೊಂಡೆವು ನಮ್ಮನ್ನು ಕ್ಷಮಿಸಿ, ಚಿಟ್ಟೆಯ ಅಂದವನ್ನು ಸಹಿಸದ ನೀವು ರೆಕ್ಕೆಗಳನ್ನು ಸಿಗಿದಿರಿ, ವಿರೂಪಗೊಂಡರೂ ನಿರ್ಲಿಪ್ತತೆ ನಟಿಸಿದರಾಯ್ತು, ಬಿಟ್ಟುಬಿಡಿ ಸೋಲೊಪ್ಪಿಕೊಂಡೆವು! ತತ್ವ ಸಿದ್ಧಾಂತ ಎಂದು ಬಾಯಿ ಬಡಿದುಕೊಳ್ಳಲು ನಾವೆಷ್ಟರವರು? ಅರೆ ಹೊಟ್ಟೆ ಹಾಕಿದರೂ, ಮುಚ್ಚಿದ ಬಟ್ಟೆಯೊಳಗೆ ಸಾವಿರಾರು ತೂತು ಬಿದ್ದರೂ ರಟ್ಟೆ ತುಂಬಿಸಿಕೊಂಡು ಹೋರಾಟಕ್ಕೆ ನಿಂತದ್ದು ತಪ್ಪೇ, ತಪ್ಪು; ಆದರೆ ನೀವು ನಿಮ್ಮ ಘನತೆ ಮೀರಿ ರೋಹಿತನನ್ನು ಬಾಣಲೆಯಲ್ಲಿ ಉರಿದದ್ದು, ಅವ ಮೇಲೇಳದಂತೆ ಆತ್ಮದ ಕಾಲು ಮುರಿದದ್ದು, ಕಣ್ಣಂಚಿನ ಕಂಬಿನಿಯ ಉಸಿರು ಕದ್ದು ನಿಶಬ್ಧ ಅಡರಿತು, ಇಷ್ಟಕ್ಕೆ ಬಿಡಿ ನಾವು ಸೋಲೊಪ್ಪಿಕೊಂಡೆವು! ಹಿಟ್ಟಿಲ್ಲದ ಅವನು ತನ್ಹೊಟ್ಟೆ ತುಂಬಿಸಿಕೊಳ್ಳುವುದು ಬಿಟ್ಟು ನ್ಯಾಯ, ಶಾಂತಿ, ಸಮಾನತೆ, ಗಾಂಧೀ-ಅಂಬೇಡ್ಕರ್, ಮನುಷ್ಯ ಪ್ರೀತಿ ಎಂದು ಹೊರಟದ್ದು ತಪ್ಪೇ, ಜೀವಕ್ಕಾದರೆ ಜಾತಿ, ಸಾವಿಗೂ ಜಾತಿಯೇ? ಹೋಗಲಿ ಬಿಡಿ, ನಾವು ಸೋಲೊಪ್ಪಿಕೊಂಡೆವು! ಶತ ಶತಮಾನಗಳು ವಿದ್ಯೆ, ವಿವೇಕಗಳನ್ನು ಕಸಿದಿರಿ, ಅಂತಃಸತ್ವ, ಮಾಂಸ ಖಂಡದ ಶಕ್ತಿಯನ್ನು ಬಸಿದಿರಿ, ಮನುಷ್ಯರನ್ನು ಮನುಷ್ಯರೆನಿಸಲು ಬ್ರಿಟೀಷರು ಬರಬೇಕಾಯ್ತು, ಈಗಲೂ ಸಂಸ್ಕೃತದೊಳಗೆ ಬ್ರಾಹ್ಮಣ್ಯ ನಾಜೂಕಾಗಿ ಚಲಾವಣೆಯಾಗುತ್ತದೆ; ಜನಪದರ ಆಚರಣೆಗಳು ಹೇಳ ಹೆಸರಿಲ್ಲದೆ ಮಕಾಡೆ ಮಲಗುತ್ತವೆ, ಅನಾಗರೀಕವೆಂದು ಬೀಗ ಜಡಿಸಿಕೊಂಡು! ಮೀರುವುದಿಲ್ಲ ಬಿಡಿ, ಏರುವುದಿಲ್ಲ ಬಿಡಿ, ನಿಮಗೆ ಜಿಂದಾಬಾದ್, ನಮ್ಮನ್ನು ಬದುಕಲು ಬಿಡಿ, ನಾವು ಸೋಲೊಪ್ಪಿಕೊಂಡೆವು! - ಮಂಜಿನ ಹನಿ