ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Thursday 26 November 2015

ನಾನು ಕವಿಯಾಗುಳಿಯುವುದು?


ಮಿಸುಕಾಡುತ್ತಿದ್ದ
ಕವಿತೆಯನ್ನು
ಅರ್ಧಕ್ಕೆ ತುಂಡರಿಸಿ
ಅಪೂರ್ಣವಾಗುಳಿಸಿದ
ಪಾಪಕ್ಕೆ,
ರಟ್ಟೆಯ ಬೆವರು, ಕರುಳ ಹಸಿವು,
ಕಣ್ಣೀರ ಬಿಸುಪು,
ಹುಟ್ಟು ಸಾವು, ಕ್ಲೀಷೆ - ಸಾಂತ್ವನ,
ಆದರದ ಭಾವಗಳು,
ಎಲ್ಲವೂ ಅಸಹಕಾರ ಹೂಡಿ,
ಲೇಖನಿಯಲ್ಲಿಳಿಯುತ್ತಿಲ್ಲ...

ತಿಂಗಳೊಪ್ಪತ್ತಿಗೆ ಮುಗಿದು
ಜೇಬು ಹರಿದ
ಖಾಲಿ ಸಂಬಳಗಳು,
ವ್ಯಾಪಾರದಲ್ಲೇ ಮುಗಿದುಬಿಡುವ
ಒಲವು, ದಾಂಪತ್ಯ,
ಹಸೆ ಹೊಸುಗೆ, ಪೋಲಿತನಗಳು,
ಆಧ್ಯಾತ್ಮ, ಮೌನ, ಧ್ಯಾನ
ಎಂದು ದಿಗಿಲ್ಹತ್ತಿಸಿ
ಭ್ರಮೆಯಾಗುವ ನಕಲಿತನಗಳು,
ಯಾವುವೂ ಸ್ಫುಟವಾಗುತ್ತಿಲ್ಲ,
ಭಾವಸೆಲೆಯಾಗುತ್ತಿಲ್ಲ...

ದೇಹಿ ಎಂದವನ ಹೊಟ್ಟೆ ತುಂಬಿಸದೆ
ಅಭಿಷೇಕಕ್ಕೆ ಎರವಾದ ಹಾಲು,
ಬತ್ತಿದೆದೆಯ ಕಚ್ಚಿ
ಬಾಯೊಣಗಿಸಿಕೊಳ್ಳುವ
ಅಪೌಷ್ಠಿಕ ಮಗು,
ಮಿಷಿನರಿಗಳ ಹಣದ ದಾಹಕ್ಕೆ
ಸೊರಗಿ ಕಣ್ಣೀರು ಹರಿಸುತ್ತ
ಶಿಲುಬೆಗೊರಗಿ ನಿಂತ ಯೇಸು,
ಬುರ್ಖಾದೊಳಗೆ ಕಣ್ಣೀರು ಸುರಿಸುವ
ಇಂಝಮಾಮನ ಆರನೇ ಪತ್ನಿ,
ದಲಿತನನ್ನು ಒಳಗೆ ಕೂಡದ
ಮಹಾಮಹಿಮ ಪರಮಾತ್ಮನ
ದೇವಳಗಳು, ಗೋಮಾತೆ,
ಮನಷ್ಯರನ್ನು ಕೊಂದು ಜಿಹಾದಿಗೆ
ಕುರಾನಿನ ಬಣ್ಣ ಹಚ್ಚುವ
ISIS ಮಹಾತ್ಮರು,
ಯುದ್ಧದ ಅಮಲೇರಿಸಿಕೊಂಡ
ಅಮೇರಿಕದಂತಹ ದೇಶಗಳು,
ಯಾವುವೂ ನನ್ನೊಳಗೆ
ಸಂವೇದನೆ ಹುಟ್ಟಿಸುತ್ತಿಲ್ಲ;
ಕಾವಲು ಪಡೆಗಳ ನಡುವೆ?

ಹೀಗಿರುವಾಗ ಅನಿಸಿದ್ದನ್ನು ಬರೆದು,
ನಾನು ಕವಿಯಾಗುಳಿಯುವುದು
ಕಷ್ಟದ ಮಾತೆ? ಕನಸಿಂದೆದ್ದು
ಮೈ ಚಿವುಟಿಕೊಂಡೆ,
ನಿಜ ನಿಜ ನೋಯುವುದು?

--> ಮಂಜಿನ ಹನಿ

ಚಿತ್ರಕೃಪೆ: ಗೂಗಲ್ ಅಂತರ್ಜಾಲ

No comments:

Post a Comment