ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Sunday 17 February 2013

ಅಸ್ತಿತ್ವ


ಪಂಜು ಅಂತರ್ಜಾಲ ಪತ್ರಿಕೆಯಲ್ಲಿ ಈ ಕಥೆ ಪ್ರಕಟವಾಗಿದ್ದು ಅದರ ಲಿಂಕ್ ಇಲ್ಲಿದೆ:


ಅದೊಂದು ದೊಡ್ಡ ಬಂಗಲೆ, ಸುಮಾರು ಹತ್ತಿಪ್ಪತ್ತು ವರ್ಷಗಳಿಂದ ಯಾರೂ ವಾಸವಿದ್ದಂತೆ ಕಾಣುವುದಿಲ್ಲ! ಅಲ್ಲಲ್ಲಿ ಗಿಡ ಗಂಟಿಗಳು ಬೆಳೆದು, ಆ ಬಂಗಲೆಗೆ ಭೂತ ಬಂಗಲೆಯಂತಹ ಮೆರುಗು ಕೊಟ್ಟಿದ್ದವು! ಆಗೊಮ್ಮೆ, ಈಗೊಮ್ಮೆ ನರಿಯಂತೆ ಕೂಗುವ ಕಿವಿ ಗಡಚಿಕ್ಕುವ ಸದ್ದುಗಳು, ಭಯವನ್ನು ಉತ್ಪಾದಿಸಿ, ತನುವೊಳಗಿನ ಜೀವ ಹಿಡಿಯಷ್ಟಾಗುವಂತೆ ಮಾಡುತ್ತಿದ್ದವು. ಆ ಬಂಗಲೆ ಊರಿನಿಂದ ಸಾಕಷ್ಟು ದೂರದಲ್ಲಿದ್ದುದ್ದರಿಂದ ಹಾಗೆ ಪಾಳು ಬಿದ್ದಿತ್ತೋ, ಇಲ್ಲ ಆ ಮನೆಯ ವಾರಸುದಾರರೆಲ್ಲಾ ಒಟ್ಟಾಗಿ ಯಮನ ಅತಿಥಿಗಳಾಗಿದ್ದರೋ, ಅಥವಾ ಆ ಬಂಗಲೆಯ ವಾಸ್ತು ಸರಿಯಿಲ್ಲದೆ ಅವಗಡಗಳು ಸಂಭವಿಸಿ ಭೂತ ಪ್ರೇತಗಳಾವೋ ಬಂದು ಸೇರಿಕೊಂಡಿದ್ದ ಕಾರಣವೂ ಇರಬಹುದು! ಒಟ್ಟಿನಲ್ಲಿ ಒಂದು ನರ ಪ್ರಾಣಿಯ ಸುಳಿವೂ ಆ ಬಂಗಲೆಯ ಸುತ್ತಾ ಇದ್ದಂತಿರಲಿಲ್ಲ. ನಾನು ಮಾತ್ರ ನಿರ್ಲಿಪ್ತನಾಗಿ, ಧೈರ್ಯವಹಿಸಿ ಆ ಸರಿ ರಾತ್ರಿಯ ಕಗ್ಗತ್ತಲ ನಡುವಲ್ಲಿ ದೀಪವಿಲ್ಲದೆಯೂ ನಿರಾತಂಕವಾಗಿ ಉಸಿರಾಡುತ್ತಾ ನಿಂತಿದ್ದೆ. ನನ್ನುಸಿರ ಉಚ್ಛ್ವಾಸ - ನಿಚ್ಛ್ವಾಸಗಳ ಏರಿಳಿತಗಳು ಅಕ್ಕ ಪಕ್ಕದಲ್ಲಿರುವವರಿಗೂ ಕೇಳಿಸಬಹುದಿತ್ತು, ಆದರೆ ಅಲ್ಲಿ ನನ್ನನ್ನು ಬಿಟ್ಟು ಮತ್ತಾರೂ ಇರಲಿಲ್ಲ!

ನಿಧಾನವಾಗಿ ನನ್ನ ಭಾವಾಂತರಂಗದಲ್ಲಿನ ಭಯಗಳನ್ನು ನಿಗ್ರಹಿಸುತ್ತಾ, ಆಚೀಚೆ ಯಾರಾದರೂ ಇರಬಹುದೇ? ಈ ಸ್ಥಳ ಇರುವುದಾದರೂ ಎಲ್ಲಿ ಎಂಬ ಅರಿವನ್ನು ತಂದುಕೊಳ್ಳುವ ಪ್ರಯತ್ನ ಮಾಡಬೇಕು ಎಂದುಕೊಳ್ಳುತ್ತಿದ್ದೆ! ಅಸಲಿಗೆ ನಾನು ಅಲ್ಲಿಗೆ ಹೇಗೆ ಬಂದೆ ಎಂಬ ನೆನಪೂ ಇದ್ದಂತೆ ತೋರುತ್ತಿರಲಿಲ್ಲ! ತಲೆ ಧಿಂ ಎಂದು ಹಿಡಿದುಕೊಂಡಿದೆ ಎನಿಸುತ್ತಿತ್ತು. ತಲೆ ಒತ್ತಿ ನೋಡಿಕೊಂಡೆ, ತಲೆಯ ಹಿಂಬದಿಗೆ ಯಾರಾದರೂ ಹೊಡೆದಿರಬಹುದು ಎನಿಸುತ್ತಿತ್ತು. ತಲೆಯ ಹಿಂಬಾಗ ಊದಿಕೊಂಡಂತೆನಿಸುತ್ತಿತ್ತು, ಮುಟ್ಟಿದ ಕೈಗಳಿಗೆ. ಸರಿ ಇನ್ನು ಎಷ್ಟು ಹೊತ್ತು ಈ ಅಜ್ಞಾತ ಸ್ಥಳದಲ್ಲಿ ಅಜ್ಞಾತವಾಸ ಅನುಭವಿಸುವುದು, ಇಲ್ಲಿಂದ ಹೇಗಾದರೂ ಹೊರಗೆ ಹೋಗುವ ದಾರಿ ಹುಡುಕಬೇಕು ಎಂದು ಒಳ ಮನಸ್ಸು ಹೇಳುತ್ತಿತ್ತು. ನಾನು ನಿಧಾನವಾಗಿ ನನ್ನ ಕಾಲುಗಳನ್ನೆಳೆದುಕೊಂಡು ಯಾವುದೋ ಒಂದು ದಿಕ್ಕಿನಲ್ಲಿ ಸರಿಯಲು ಪ್ರಾರಂಭಿಸಿದೆ, ಆ ಉಗ್ರ ನರಸಿಂಹನನ್ನು ನೆನೆಯುತ್ತಾ!

ಈಗ ನಾನು ಸಾಗುತ್ತಿರುವುದು ನನ್ನ ಅತೀ ದುರ್ಗಮದ ಹಾದಿಯಿರಬಹುದು ಎನಿಸಿತು! ಆ ಕಡೆ - ಈ ಕಡೆ ನೋಡುತ್ತಾ, ನಿಧಾನವಾಗಿ ಒಂದೊಂದೇ ಹೆಜ್ಜೆಯಿಡುತ್ತಾ ಬೆಳಕನ್ನು ಹುಡುಕುತ್ತಿದ್ದೆ. ಬಂಗಲೆ ಸುಮಾರು ಏಳೆಂಟು ಅಂತಸ್ತಿನದಾಗಿದ್ದು, ನಾನು ಈಗಿರುವುದು ಕಡೆಯ ಅಂತಸ್ತು ಎನಿಸುತ್ತಿತ್ತು. ಸಾವಕಾಶವಾಗಿ ಮೆಟ್ಟಿಲಿಳಿಯುವ ಹಾದಿಯನ್ನು ಹುಡುಕುತ್ತಿದ್ದೆ. ಪ್ರತಿಯೊಂದು ಅಂತಸ್ತೂ ವೃತ್ತಾಕಾರವಾಗಿದ್ದು, ಒಂದು ದಿಕ್ಕಿನಲ್ಲಿ ಪ್ರಾರಂಭಿಸಿದರೆ ಒಂದು ಆವೃತ್ತದ ನಂತರ ಮತ್ತೆ ಪ್ರಾರಂಭಕ್ಕೇ ತಂದು ನಿಲ್ಲಿಸುತ್ತಿತ್ತು. ಮಧ್ಯದಲ್ಲಿ ಕೆಳ ಅಂತಸ್ತನ್ನೂ, ಮೇಲಂತಸ್ತನ್ನೂ ನೋಡಬಹುದಾದ ವೃತ್ತಾಕಾರದ ಪ್ಯಾಸೇಜ್ ಇತ್ತು. ಕೆಳಗೆ ಇಳಿಯುವ ಮೆಟ್ಟಿಲುಗಳ ಕುರುಹೇ ಸಿಗುತ್ತಿರಲಿಲ್ಲ. ಹೇಗೋ ಮೂರು ಸುತ್ತು ಸುತ್ತಿದ ನಂತರ ಆರನೇ ಅಂತಸ್ತಿಗೆ ಇಳಿಯಲು ಒಂದು ಸಣ್ಣ ಕಿಂಡಿಯಾಕಾರದ ದಾರಿ ಸಿಕ್ಕಿತು. ಅದರೊಳಗೆ ಕಷ್ಟ ಪಟ್ಟು ತೂರಿ ಕೆಳಗಿಳಿದೆ. ಆರನೇ ಅಂತಸ್ತು ತಲುಪಿದ ನಾನು ಉಸಿರು ಬಿಡುತ್ತಾ ಹೇಗಾದರೂ ಇಲ್ಲಿಂದ ಬಚಾವಾಗಬಹುದೇನೋ ಎಂದು ಆಶಾಕಿರಣ ಹಚ್ಚಿಟ್ಟೆ, ನನ್ನ ಮನದೊಳಗೆ! ಹಾಗೆ ನನ್ನದೇ ಯೋಚನೆಗಳಲ್ಲಿ ಮೈಮರೆತಿದ್ದ ನನ್ನ ಪಕ್ಕದಲ್ಲಿ ಎಲ್ಲಿಂದಲೋ ತೂರಿಕೊಂಡು ಬಂದು ದೊತ್ತೆಂದು ಅದೇನೋ ಬಿದ್ದ ಸಪ್ಪಳವಾಯ್ತು. ನನ್ನ ಎದೆ ಬಡಿತ ಜೋರಾಯ್ತು! ಹಾಗೆ ದೊತ್ತೆಂದು ಬಿದ್ದ ವಸ್ತು ನಿಧಾನಕ್ಕೆ ಚಲಿಸುವ ಶಬ್ದ ಮಾಡಿತು. ನಾನು ಒಮ್ಮೆಲೇ ಬೆಚ್ಚಿಬಿದ್ದೆ! ನಿಧಾನಕ್ಕೆ ಬಾಲ ಗುಡಿಸಿದಂತಾಗಿ, ತನ್ನ ಹೊಳೆಯುವ ಕಣ್ಣುಗಳನ್ನೊಮ್ಮೆ ಜಳಪಿಸಿದ ಆ ಪ್ರಾಣಿ, 'ಮೀಯಾಂ...' ಎಂದೊಡನೆ ನನಗೆ ಚಳಿ ಜ್ವರ ಬಂದು ಬಿಟ್ಟಂತಾಯ್ತು! "ಥೂ ಹಾಳಾದ್ದು ಬೆಕ್ಕು" ಎಂದು ನನ್ನನ್ನು ನಾನೇ ಸಂತೈಸಿಕೊಂಡೆ.

ಹಾಗೆ ನಡೆಯುತ್ತಾ ನನ್ನ ಕೆಳ ಅಂತಸ್ತಿಗೆ ತಲುಪುವ ಮೆಟ್ಟಿಲುಗಳ ಹುಡುಕಾಟವನ್ನು ಮುಂದುವರೆಸಿದೆ. ಆರನೆಯ ಅಂತಸ್ತಿನಲ್ಲಿ ಕೆಲವು ರೂಮುಗಳಿರುವಂತೆ ಕಂಡುಬಂತು. ನಾನು ಆ ಅಂತಸ್ತನ್ನೂ ಒಂದು ಆವೃತ್ತ ಬಂದ ನಂತರ, ರೂಮುಗಳಲ್ಲಿ ಹೇಗಾದರೂ ಕೆಳಗಿಳಿಯಬಹುದೇನೋ ಎಂದು ಪ್ರತಿಯೊಂದು ರೂಮುಗಳ ಸಂದರ್ಶನವನ್ನು ಶುರು ಮಾಡಿದೆ. ಎರಡನೇ ರೂಮಿನಲ್ಲಿ ಐದನೇ ಅಂತಸ್ತಿಗಿಳಿಯುವ ದಾರಿ ಸಿಕ್ಕಿತು. ಐದನೇ ಅಂತಸ್ತಿಗೆ ಬರುತ್ತಿದ್ದಂತೆ ಅದು ಒಂದು ದೊಡ್ಡ ಹಾಲ್ ನಂತೆ ಕಾಣಿಸಿತು. ಅದನ್ನು ಮನೆಯ ವಾರಸುದಾರರು ಸಮಾರಂಭಗಳನ್ನು ಆಯೋಜಿಸಲು, ಇಲ್ಲವೇ ಪಾರ್ಟಿಗಳನ್ನು ಹಮ್ಮಿಕೊಳ್ಳಲು ಬಳಸುತ್ತಿದ್ದಿರಬಹುದು ಎನಿಸಿತು. ಅಲ್ಲಲ್ಲಿ ದುಂಡನೆಯ ಮೇಜುಗಳು ಮತ್ತು ವೈಭವೋಪೇತ ಕುರ್ಚಿಗಳು ಕಾಣುತ್ತಿದ್ದವು. ಹಾಗೆ ಆ ಅಂತಸ್ತನ್ನು ಪರಿಶೀಲಿಸುತ್ತಿದ್ದಂತೆ ಕೆಲವರ ಓಡಾಟ ಮತ್ತು ಪಿಸುಗುಟ್ಟುವಂತಹ ಮಾತುಗಳು ಕೇಳಿಸಲು ಶುರುವಾದವು. ನನಗೆ ಇನ್ನಿಲ್ಲದ ಭಯ ಶುರುವಾಯ್ತು. ಇದೇನು ಯಾರು ಇಲ್ಲವೆಂದುಕೊಂಡಿದ್ದ ಬಂಗಲೆಯಲ್ಲಿ ಈ ಪಿಸುಮಾತುಗಳು ಎಲ್ಲಿಂದ ಬರುತ್ತಿವೆಯಪ್ಪಾ ಎಂದು ಭಯವಾಗಿ 'ಹನುಮಂತ ಚಾಳೀಸ'ವನ್ನು ಹೇಳಿಕೊಳ್ಳಲು ಶುರುಮಾಡಿದೆ, ಭಯಕ್ಕೆ ನಾಲಿಗೆ ತೊದಲುತ್ತಿತ್ತು! ಆದದ್ದು ಆಗಲಿ ಎಂದು ಪಿಸುಮಾತುಗಳ ಶಬ್ದ ಬರುತ್ತಿದ್ದೆಡೆಗೆ ಹೆಜ್ಜೆ ಹಾಕಿದೆ. ಅದ್ಯಾವುದೋ ರೂಮಿನಲ್ಲಿ ನಾಲಿಗೆ ಚಪ್ಪರಿಸುತ್ತಿರುವ ಶಬ್ಧವಾಗುತ್ತಿತ್ತು! ನಾನು ಆ ಕಡೆಗೆ ನಡೆಯುತ್ತಿದ್ದಂತೆ, ಆಯ ತಪ್ಪಿ ಮೆಟ್ಟಿಲುಗಳ ಮೇಲುರುಳಿ ನಾಲ್ಕನೇ ಅಂತಸ್ತಿಗೆ ಬಿದ್ದಿದ್ದೆ!

ಎದುರಿಗೆ ಯಾರೋ ನನ್ನ ವಿರುದ್ಧ ದಿಕ್ಕಿಗೆ ಮುಖ ಮಾಡಿಕೊಂಡು ಅದೇನನ್ನೋ ತಿನ್ನುತ್ತಿರುವಂತೆನಿಸುತ್ತಿತ್ತು. ನಾನು ನಿಧಾನವಾಗಿ ಹೆಜ್ಜೆಯ ಮೇಲೆ ಹೆಜ್ಜೆಯನಿಡುತ್ತಾ ಆ ಆಕೃತಿಯನ್ನು ಸಮೀಪಿಸಿದೆ. ಆ ಆಕೃತಿ ಯಾವುದೋ ರುಂಡವಿಲ್ಲದ ದೇಹದಿಂದ ಬಾಯಿ ಹಾಕಿ ರಕ್ತ ಕುಡಿಯುತ್ತಿತ್ತು. ನಾನು ಅದನ್ನು ನೋಡಿ ಬೆಚ್ಚಿ ಬಿದ್ದು, ಅಯ್ಯೋ ಎಂದು ಕೂಗಲು ಪ್ರಯತ್ನಿಸಿದೆ, ಮಾತುಗಳು ಮಾತ್ರ ಹೊರಬರಲಿಲ್ಲ! ಆಡಿಸಲು ಪ್ರಯತ್ನಪಟ್ಟ ಕೈಕಾಳುಗಳೂ ಅಲುಗಾಡಲಿಲ್ಲ. ನನಗೆ ಇದು ಕನಸೇ ಅಥವಾ ನನಸೇ ಎಂಬ ಬಗ್ಗೆ ಜಿಜ್ಞಾಸೆ ಶುರುವಾಯ್ತು! ನನ್ನ ಮೈಯ್ಯನ್ನೊಮ್ಮೆ ಚಿವುಟಿ ನೋಡಿಕೊಂಡೆ! ಎಲ್ಲವೂ ನಿಜವೇ ಎನ್ನುವುದು ಖಾತ್ರಿಯಾಯ್ತು! ಇನ್ನೇನು ಮಾಡುವುದು, ಪರಿಣಾಮ ಏನೇ ಆದರೂ ಆ ಕುರೂಪ ಆಕೃತಿಯನ್ನು ಎದುರಿಸುವುದೇ ಈಗ ಉಳಿದಿರುವ ದಾರಿ ಎಂದು ನಿಶ್ಚಯಿಸಿಕೊಂಡೆ. ಕಡೆಗೆ ಧೈರ್ಯ ಮಾಡಿ ಆ ಕುರೂಪ ಆಕೃತಿಯನ್ನುದ್ದೇಶಿಸಿ, "ಹೇ, ಯಾರು ನೀನು? ನಿನಗೆ ತಿನ್ನಲು ಮನುಷ್ಯ ಮಾಂಸವೇ ಬೇಕೇ? ಮನುಷ್ಯರ ಮಾಂಸವನ್ನು ತಿನ್ನಲು ನಿನಗೆ ಹೇಸಿಗೆಯಾಗುವುದಿಲ್ಲವೇ? ನೀನೂ ನೋಡಲು ಹೆಚ್ಚೂ ಕಮ್ಮಿ ಮನುಷ್ಯರಂತೆಯೇ ಇರುವೆ! ಒಬ್ಬ ಮನುಷ್ಯ ಮತ್ತೊಬ್ಬನನ್ನು ಹೀಗೆ ಬಗೆದು ತಿನ್ನುವುದು ಅನಾಗರೀಕತೆಯಲ್ಲವೇಆ ದೇಹವನ್ನು ಅಲ್ಲಿಯೇ ಬಿಟ್ಟು ಮೇಲೆ ಏಳು ಪ್ರಾರಬ್ಧ ಕರ್ಮವೇ!" ಎಂದು ಗದರಿಸಿದೆ. ಅದಕ್ಕೆ ನನ್ನ ಯಾವೊಂದು ಮಾತುಗಳೂ ಮುಟ್ಟಿದಂತೆ ಕಾಣಲಿಲ್ಲ, ಅದು ಅದರ ಪಾಡಿಗೆ ತನ್ನ ಅಮಾನುಷ ಕೆಲಸ ಮುಂದುವರೆಸಿಯೇ ಇತ್ತು! ಆ ಮನುಷ್ಯನ ರಕ್ತವನ್ನು ಸಂಪೂರ್ಣ ಹೀರಿ, ಮಾಂಸವನ್ನು ತಿನ್ನಲು ಶುರು ಮಾಡಿತ್ತು.

ನನಗೆ ಆ ಅಮಾನವೀಯ ದೃಶ್ಯವನ್ನು ನೋಡಿ, ಅಸಹ್ಯದೊಂದಿಗೆ ರೋಷವೂ ಉಕ್ಕಿ ಬಂತು! ನಾನು ನನ್ನ ಕಾಲನ್ನು ಜಾಡಿಸಿ ಆ ಆಕೃತಿಗೆ ಒದ್ದೆ. ಅದು ಒಂದಿಂಚೂ ಕದಲಲಿಲ್ಲ! ತನ್ನ ಪಾಡಿಗದು ಎದೆಯನ್ನು ಬಗೆದು ಹೃದಯವನ್ನು ಹೊರಗೆಳೆದು, ತಿನ್ನಲು ಶುರು ಮಾಡಿತು. ನಾನು ಅದನ್ನು ಎಚ್ಚರಿಸಲು ಇಷ್ಟೆಲ್ಲಾ ಪ್ರಯತ್ನಪಟ್ಟರೂ ಸಫಲವಾಗದಾದಾಗ, ಅವಮಾನಿತನಾದಂತೆನಿಸಿ ಆ ಆಕೃತಿಯೆಡೆಗೆ ರೋಷದಿಂದ ನೋಡಿದೆ. ಅದರ ಮುಂದೆ ನನ್ನ ತ್ರಿವಿಕ್ರಮ ಪೌರುಷ ಪ್ರದರ್ಶಿಸುವ ಆಸೆಯಿಂದ ಅಕ್ಕಪಕ್ಕ ಏನಾದರೂ ಆಯುಧಗಳು ಸಿಗಬಹುದೇ ಎಂದು ಅತ್ತಿತ್ತ ನೋಡುತ್ತಾ ಹುಡುಕುತ್ತಿದ್ದೆ. ಆ ಕೋಣೆಯ ಬಲಮೂಲೆಯಲ್ಲಿದ್ದ ಒಂದು ಕೊಡಲಿ ತಾನಿರುವುದರ ಸುಳಿವು ಕೊಟ್ಟಿದ್ದೇ ತಡ, ಅದರೆಡೆಗೆ ಧಾವಿಸಿ ಅದನ್ನು ಎರಡೂ ಕೈಗಳಲ್ಲಿ ಸೇರಿಸಿ ಎತ್ತಿ ಜಳಪಿಸುವ ರೀತಿಯಲ್ಲೊಮ್ಮೆ ಬೀಸಿದೆ. ಕೊಡಲಿಯನ್ನು ಕೈಯ್ಯಲ್ಲಿಡಿದದ್ದೇ ತಡ ಆಕ್ರೋಶವನ್ನು ದೇಹದಲ್ಲಿ ಆವಾಹಿಸಿಕೊಂಡವನಂತೆ ಆ ಆಕೃತಿಯೆಡೆಗೆ ಮುನ್ನುಗ್ಗಿ ಕೊಡಲಿಯನ್ನು ಬೀಸಿದೆ! ಅದು ಯಾವ  ಚಲನೆಯನ್ನೂ ತೋರಲಿಲ್ಲ! ಈ ರೀತಿಯಾಗಿ  ಆಕೃತಿ ಪದೇ ಪದೇ ನನ್ನಸ್ಥಿತ್ವವನ್ನು ಕೆಣಕುತ್ತಿರುವುದು ನನ್ನಲ್ಲಿ ಇನ್ನಷ್ಟು ರೋಷ ಉಕ್ಕುವಂತೆ ಮಾಡಿತ್ತು. ಹೇಗಾದರೂ ಮಾಡಿ ಆ ಆಕೃತಿಯ ಗಮನವನ್ನು ನನ್ನೆಡೆಗೆ ಸೆಳೆಯಲು ಯೋಚಿಸುತ್ತಿದ್ದಾಗ, ಅದು ನನ್ನೆಡೆಗೆ ತಿರುಗಿ ತನ್ನ ಬಾಯಿಗೆ ಮೆತ್ತಿಕೊಂಡಿದ್ದ ರಕ್ತವನ್ನು ಒರೆಸಿಕೊಂಡಿತು! ಎದುರಿಗೆ ಕಂಡ ದೃಶ್ಯ ಕಂಡು ಹೌಹಾರಿಬಿಟ್ಟಿದ್ದೆ, ಆ ವಿಕಾರ ಆಕೃತಿ ನಾನೇ ಆಗಿದ್ದೆ! ಅದು ಹೇಗೆ ನಾನಾಗಲು ಸಾಧ್ಯ ಎಂದು ನನ್ನನ್ನೇ ನಾನು ಪರಿಶೀಲಿಸುವ ರೀತಿಯಲ್ಲಿ ನನ್ನ ಮುಖ ಮೂತಿಯನ್ನೆಲ್ಲಾ ಮುಟ್ಟಿ ನೋಡಿಕೊಂಡೆ. ನನ್ನ ಮೈ ಕೈಗಳಲ್ಲಿ ಅಸಾಧ್ಯ ನೋವಿರುವಂತೆಯೂ ಹಿಂಬದಿಯ ತಲೆಯ ಭಾಗದಲ್ಲಿ ಒಡೆದು ರಕ್ತ ಸೋರುತ್ತಿರುವಂತೆಯೂ ಭಾಸವಾಯ್ತು. ಈ ಎಲ್ಲಾ ವ್ಯತಿರಿಕ್ತ ಪರಿಸ್ಥಿತಿಗಳು ಉತ್ಪಾದಿಸಿದ ಭಯವನ್ನು ಪ್ರತಿಭಟಿಸುವ ತೆರದಿ ಆ ಕೋಣೆಯನ್ನು ಬಿಟ್ಟು ಓಡಿ ಹೋಗಲು ಈ ಕಡೆ ತಿರುಗಿದೆ. ದೇಹದಿಂದ ಬೇರ್ಪಡಿಸಿದ ನನ್ನ ರುಂಡ ಅಲ್ಲಿ ಬಿದ್ದು ಒದ್ದಾಡುತ್ತಿತ್ತು! ನನ್ನನ್ನೇ ನಾನೇ ಬಗೆದು ತಿಂದುಕೊಳ್ಳುತ್ತಿದ್ದೆ ಆ ಏಳಂತಸ್ತಿನ ಬಂಗಲೆಯೊಳಗೆ! ನನ್ನ ಹುಚ್ಚು ಆಸೆಗಳೇ ಭೂತವಾಗಿ, ನನ್ನೊಳಗಿನ ಒಳ್ಳೆಯತನಗಳ ಇಂಚಿಂಚನ್ನೂ ತಿನ್ನುತ್ತಿದ್ದೆ! ಹೊರಗಿನ ಜಗತ್ತಿಗೆ ಪ್ರೇತವಾಗಿದ್ದೆ! ಭೌತಿಕವಾಗಿ ಅಸ್ಥಿತ್ವವೇ ಇಲ್ಲದವನಾಗಿದ್ದೆ!

- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಅಂತರ್ಜಾಲ

No comments:

Post a Comment