ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Wednesday 13 February 2013

ತೊರೆಯ ಮೇಲಿನ ಬದುಕು! - ೩





ಒಡಲು ಸೇರಿದ ತೊರೆ!
----------------------

ಬೇರೆಲ್ಲೋ ನೆಲೆಸಿದ್ದಾರೆ ಎಂಬುದು ಗೊತ್ತಾಯಿತು ಆದರೆ ಎಲ್ಲಿ, ಅದನ್ನು ಪತ್ತೆ ಹಚ್ಚುವ ಬಗೆ ಹೇಗೆ? ಹುಡುಕಿದ ಮೇಲೆ ಅವರ ಮನೆಯವರನ್ನು ನಮ್ಮ ಮದುವೆಗೆ ಒಪ್ಪಿಸುವುದು ಹೇಗೆ? ಅಕಸ್ಮಾತ್ ಅವಳಿಗೆ ಈಗಾಗಲೇ ಮದುವೆ ಆಗಿಬಿಟ್ಟಿದ್ದರೆ? ಎಂಬ ಯೋಚನೆಗಳು ಬರುತ್ತಿದ್ದಂತೆಯೇ ಬಾಳು ಬತ್ತಿದಂತೆ ಭಾಸವಾಯ್ತು! ಅವಳಿಲ್ಲದೇ ಈ ರಾಘು ನಡೆದಾಡುವ ಶವವಾಗಿಬಿಡುವ ಅಪಾಯವಿತ್ತು!

ಅಲ್ಲಿಂದ ನನ್ನ ಪ್ರೀತಿಯನ್ನು ಹುಡುಕುವ ಕಾರ್ಯ ಆರಂಭವಾಯ್ತು! ಮಧೂನ ತಂದೆ ಸಿ.ಪಿ.ಸಿ ಪಾಲಿಟೆಕ್ನಿಕ್ ಅಲ್ಲಿ ಹಿರಿಯ ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದುದು ಗೊತ್ತಿತ್ತು. ಅಲ್ಲಿ ಹೋಗಿ ವಿಚಾರಿಸಿದರೆ ಅವರು ಎಲ್ಲಿಗೆ ವರ್ಗವಾದರು ಎಂಬ ಬಗ್ಗೆ ಮಾಹಿತಿ ಸಿಗಬಹುದಿತ್ತು. ಆ ಯೋಚನೆ ನನ್ನ ತಲೆಯಲ್ಲಿ ರೂಪುಗೊಂಡಿದ್ದೇ ತಡ, ಒಂದು ಕ್ಷಣವನ್ನೂ ಕಾಯದೆ ಸಿ.ಪಿ.ಸಿ ಯ ಹಾದಿ ಹಿಡಿದೆ. ಅಲ್ಲಿ ಮ್ಯೆಕಾನಿಕಲ್ ಡಿಪಾರ್ಟ್ಮೆಂಟ್ ಗೆ ಹೋಗಿ, ನಾನು ನಾಗೇಶ್ ಅಯ್ಯರ್ ರವರ ಶಿಷ್ಯ, ಯಾವುದೋ ಬ್ಯಾಚ್ ಎಂದು ಸುಳ್ಳು ಹೇಳಿ, ಅವರ ವರ್ಗಾವಣೆಯ ಸಂಪೂರ್ಣ ಮಾಹಿತಿ ಕೇಳಿ ತಿಳಿದೆ! ಅವರು ಬೆಂಗಳೂರಿನ ಸರ್ಕಾರೀ ಪಾಲಿಟೆಕ್ನಿಕ್ ಗೆ ಆರು ತಿಂಗಳುಗಳ ಹಿಂದಷ್ಟೇ ವರ್ಗವಾದರು ಎಂಬ ಮಾಹಿತಿ ಸಿಕ್ಕಿತು! ಬೆಂಗಳೂರಿನಲ್ಲಿ ಮಧೂನ ಮನೆ ಹುಡುಕುವ ಶ್ರಮ ನೆನಪಿಸಿಕೊಂಡೇ ಬೆವತು ಹೋದೆ!

ಸರಿ ಅಲ್ಲಿಂದ ನನ್ನ ಪಯಣ ಬೆಂಗಳೂರಿನತ್ತ… ನನ್ನ ಬೈಕ್ ಹತ್ತಿ ಕುಳಿತುಕೊಂಡವನೇ ಲಾಂಗ್ ಜರ್ನಿಯಾಗುವುದನ್ನೂ ಲೆಕ್ಕಿಸಿದೆ ಬೆಂಗಳೂರಿನ ಕಡೆ ಹೊರಟೆ! ಆ ನೂರೈವತ್ತು ಪ್ಲಸ್ ಕಿಲೋಮೀಟರುಗಳ ಪ್ರಯಾಣದಲ್ಲಿ ಮನಸ್ಸು ಆಗಬಹುದಾದ ಎಲ್ಲಾ ಸಾಧ್ಯತೆಗಳನ್ನೂ ಚಿಂತಿಸುತ್ತಿತ್ತು!

ನಾನು ಮಾಂಸ ತಿನ್ನುವ ಜಾತಿಯಿಂದ ಬಂದವನು ಅವಳೋ ಮೊಟ್ಟೆ ಕೂಡ ಮಾಂಸಾಹಾರಿ ಎನ್ನುವ ಶುದ್ಧ ಸಸ್ಯಾಹಾರಿ ಬ್ರಾಹ್ಮಣರ ಹುಡುಗಿ, ನಮ್ಮ ವಿಷಯ ತಿಳಿಯುತ್ತಿದ್ದಂತೆ ಅವರ ಮನೆಯಲ್ಲಿ ಮಡಿ ಮೈಲಿಗೆ ಎಂದು ಬಾಯಿ ಬಾಯಿ ಬಡಿದರೆ ಏನು ಮಾಡುವುದು? ನಾನೂ ಅವರಂತೆಯೇ ರಕ್ತ ಮಾಂಸಗಳನ್ನೇ ತುಂಬಿಕೊಂಡಿರುವ ಮನುಷ್ಯನಲ್ಲವೇ? ನನ್ನಲ್ಲೂ ಮನುಷ್ಯ ಸಹಜ ಪ್ರೀತಿ, ಪ್ರೇಮ, ಅನುಬಂಧ, ಸಂವೇಧನೆ, ಆಸೆ - ಆಕಾಂಕ್ಷೆಗಳೆಲ್ಲವೂ ಇಲ್ಲವೇ? ಅವರಿಗಿಂತ ನಾನು ಹೇಗೆ ಭಿನ್ನ? ಕೇವಲ ಆಹಾರ ಪದ್ಧತಿಗಳು ನಮ್ಮೀರ್ವರಲ್ಲಿ ಇಂಥ ಭಿನ್ನತೆಗಳನ್ನೂ ಸೃಷ್ಟಿಸಬಲ್ಲವೆ? ಹಾಗೆ ನೋಡುವುದಾದರೆ ಅವರೂ ಜೀವವಿರುವ ಸಸ್ಯಗಳನ್ನು ಕೊಂದು ತಿಂದೇ ಬದುಕುತ್ತಾರೆ ತಾನೇ? ನಾನು ಮಾಂಸಹಾರಿ ಎಂದ ಮಾತ್ರಕ್ಕೆ ಸಸ್ಯಗಳನ್ನು ತಿಂದು ಬದುಕುವ ಅವರಲ್ಲಿಲ್ಲದ ಕ್ರೂರತೆ ನನ್ನಲ್ಲಿ ಮಾತ್ರ ಬಂದು ಸೇರಲು ಹೇಗೆ ಸಾಧ್ಯ? ಪ್ರೀತಿ ಮಾಡಲು ಅಡ್ಡಬರದ ಈ ಜಾತಿ ಪದ್ಧತಿ ಮತ್ತು ಧರ್ಮಗಳು ಮದುವೆ ಸಮಯದಲ್ಲೇಕೆ ಅಡ್ಡ ಬರುತ್ತವೆ? ಮನುಷ್ಯತ್ವವೂ ಒಂದು ಜಾತಿಯೂ, ಧರ್ಮವೂ ಎಂದೇಕೆ ಈ ಜನ ಭಾವಿಸುವುದಿಲ್ಲ? ಎಂಬಿತ್ಯಾದಿ ಕೇಂದ್ರವಿಲ್ಲದೆ ಗಿರಕಿ ಹೊಡೆಯುವ ತರ್ಕಗಳಲ್ಲಿ ಮನ ಜರ್ಜರಿತವಾದಂತಿತ್ತು! ಇಷ್ಟೆಲ್ಲಾ ತೊಡಕುಗಳ ನಡುವೆ ಒಂದೊಮ್ಮೆ ಇಷ್ಟರಲ್ಲಾಗಲೇ ಮಧೂವಿಗೆ ಮದುವೆ ಆಗಿಬಿಟ್ಟಿದ್ದರೆ? ಎಂಬ ಪ್ರಶ್ನೆ ಹೃದಯದೊಳಕ್ಕೆ ತೂರಿದೊಡನೆ ಹೃದಯಸ್ಥಂಭನವಾಗಿಬಿಡಬಹುದೇನೋ ಎನಿಸಿತು! ಆದರೆ ಮನದ ಗಮ್ಯ ಮಾತ್ರ ಸ್ಪಷ್ಟವಿತ್ತು, ’ಮಧೂನ ಪ್ರೀತಿ’!

ನಾಗೇಶ್ ಅಯ್ಯರ್ ರವರ ಸರ್ಕಾರಿ ಪಾಲಿಟೆಕ್ನಿಕ್ ಪತ್ತೆ ಹಚ್ಚಿದವನೇ ನೇರ ಅವರಲ್ಲಿಗೆ ಹೋಗಿ ಮಾತನಾಡಲೇ? ಎಂದು ಒಮ್ಮೆ ಯೋಚಿಸಿದೆ. ಮೊದಲು ಮಧೂನೊಂದಿಗೆ ಮಾತನಾಡಿ ನಂತರ ಮುಂದುವರೆದರೆ ಒಳ್ಳೆಯದೇನೋ ಎಂಬ ಯೋಚನೆಯೂ ಬಂತು! ಆದರೆ ನನಗೆ ನನ್ನ ಪ್ರೀತಿಯ ಮೇಲಿದ್ದ ಅದಮ್ಯ ವಿಶ್ವಾಸ ನೇರವಾಗಿ ನಾಗೇಶ್ ಅಯ್ಯರ್ ರವರ ಮುಂದೆಯೇ ನಿಲ್ಲಿಸಿತು. ನಾನು ನೇರವಾಗಿ ಮ್ಯಾಕಾನಿಕಲ್ ಅಧ್ಯಾಪಕರ ಕೊಠಡಿ ಹುಡುಕಿ ನಾಗೇಶ್ ರವರ ಮುಂದೆ ನಿಂತಿದ್ದೆ! ನನ್ನನ್ನು ಕಂಡ ಅವರ ಕಣ್ಣುಗಳಲ್ಲಿದ್ದ ಅಸಹನೆಯನ್ನು ಗುರ್ತಿಸಬಲ್ಲ ಸಂವೇಧನಾಶೀಲತೆ ನನ್ನಲ್ಲಿತ್ತು ಅನ್ನೀ! ಯಾರಿಗೆ ತಾನೇ ತನ್ನ ಮಗಳನ್ನು ಯಾವನೋ ಅನ್ಯ ಜಾತಿಯವನಿಗೆ ಕೊಟ್ಟು ಮದುವೆ ಮಾಡುವಷ್ಟು ಸಹನೆ ಇರುತ್ತದೆ?! ಅವರು ತಮ್ಮ ಕಡೆಯ ಕ್ಲಾಸ್ ಮುಗಿಸಿ ಹೊರಡುವ ತರಾತುರಿಯಲ್ಲಿದ್ದಂತೆ ಕಾಣುತ್ತಿತ್ತು! ಅವರ ಮುಂದೆ ನಿಂತಿದ್ದ ನಾನು,

“ಹಲೋ ಸರ್, ನಾನು ರಾಘವಾ… ಮಧುವಂತಿಯ ಗೆಳೆಯ, ನಿಮಗೆ ನೆನಪಿರಬಹುದೆಂದು ಭಾವಿಸುವೆ” ಎಂದೆ.

ಅವರಿಗೆ ಅಲ್ಲಿ ಎಲ್ಲಾ ಸ್ಟಾಫ್ ಗೂ ನಮ್ಮ ಮಾತೂಕತೆ ತಿಳಿಯುವುದು ಬೇಕಿರಲಿಲ್ಲ, ಅದನ್ನು ತಮ್ಮ ಮುಖಭಾವದಿಂದಲೇ ಸಂವಹನಗೈಯ್ಯುತ್ತಿದ್ದರು! ಪರಿಸ್ಥಿತಿಯನ್ನು ಗಮನಿಸಿದ ನಾನು ಹೊರಗೆ ಪಾರ್ಕ್ ಇದೆ, ಅಲ್ಲಿ ಸಾವಕಾಶವಾಗಿ ಮಾತನಾಡೋಣ ಎಂದು ಕರೆದುಕೊಂಡು ಹೋದೆ. ಅಲ್ಲಿ ಅವರೇ ನಾನು ಅವರಲ್ಲಿಗೆ ಬಂದುದರ ಬಗ್ಗೆ ವಿಚಾರಿಸಿದರು. ನಾನು ಮುಂದುವರೆಸುತ್ತಾ,

“ಸರ್ ನೀವು ಹೇಳಿದ್ದಿರಿ, ’ಮೊದಲು ನಿನ್ನ ಕಾಲ ಮೇಲೆ ನೀನು ನಿಲ್ಲು’ ಎಂದು, ಈಗ ನಾನು ಪ್ರತಿಷ್ಠಿತ ’ಎಕ್ಸಲೆಂಟ್ ಎಲೆಕ್ಟ್ರಾನಿಕ್ಸ್’ ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೇನೆ. ಜವಾಬ್ದಾರಿಯಂತಿದ್ದ ನನ್ನ ತಂಗಿಯ ಮದುವೆಯನ್ನೂ ಮಾಡಿ ಮುಗಿಸಿದ್ದೇನೆ! ನಾನು ಮಧುವಂತಿಯನ್ನು ಮನಸಾರೆ ಪ್ರೀತಿಸುತ್ತೇನೆ, ಅವಳನ್ನು ನನಗೆ ಕೊಟ್ಟು ಮದುವೆ ಮಾಡುತ್ತೀರಾ?” ಎಂದು ಕೇಳಿದೆ.

ನನ್ನ ನೇರ ಪ್ರಶ್ನೆಯಿಂದ ಸ್ವಲ್ಪ ವಿಚಲಿತರಾದಂತೆ ಕಂಡು ಬಂದ ಅವರು, “ಮಧೂನೊಂದಿಗೆ ಈ ವಿಷಯದ ಬಗ್ಗೆ ಮಾತನಾಡಿದ್ದೀಯಾ? ಅವಳ ಅಭಿಪ್ರಾಯವೇನು ಎಂಬ ಬಗ್ಗೆ ನಿನ್ನಲ್ಲಿ ಸ್ಪಷ್ಟತೆ ಇದೆಯೇ?” ಎಂದರು.

ನಾನು, “ಮಧೂಗೆ ನಾನು ಅವಳನ್ನು ಪ್ರೀತಿಸುತ್ತೇನೆ ಎಂಬುದು ಗೊತ್ತು, ಅವಳೂ ನನ್ನನ್ನು ಪ್ರೀತಿಸುತ್ತಾಳೆ! ನಿಮಗೆ ಗೊತ್ತಿರಲಿಕ್ಕಿಲ್ಲ ನೀವು ನನಗೆ ಅಂದು ಕರೆ ಮಾಡಿದಾಗಿನಿಂದ ನಾನು ಮತ್ತು ಮಧೂ ಮತ್ತೆಂದೂ ಮಾತನಾಡಲಿಲ್ಲ! ಯಾವುದೇ ರೀತಿಯ ಕಮ್ಯುನಿಕೇಶನ್ ಇಲ್ಲ! ಈ ಎರಡು ವರ್ಷಗಳ ನಮ್ಮ ನಡುವಿನ ಮೌನ ನಮ್ಮ ಪ್ರೀತಿಯನ್ನು ಕಡಿಮೆ ಮಾಡಿರುತ್ತದೆ ಎಂದು ನನಗನ್ನಿಸುವುದಿಲ್ಲ” ಎಂದೆ.

“ಸರಿ ನಡಿ, ಮನಗೆ ಹೋಗಿ ಅಲ್ಲಿಯೇ ಮಾತನಾಡೋಣ” ಎಂದು ನನ್ನನ್ನು ಅವರೊಂದಿಗೆ ಅವರ ಮನೆಗೆ ಕರೆದೊಯ್ದರು. ನಾನು ಅವರ ಮನೆಯೊಳಗೆ ಕಾಲಿಡುತ್ತಿದ್ದಂತೆಯೇ ನನ್ನನ್ನು ಕಂಡ ಮಧೂ ತನಗೆ ಸಂಬಂಧವೇ ಇಲ್ಲದಂತೆ ಒಳಗೆ ಹೋದಳು! ನನ್ನ ಮನಸ್ಸಿಗೆ ಸ್ವಲ್ಪ ಕಸಿವಿಸಿಯಾಯ್ತು ಆದರೆ ಅವಳ ಕಾಲುಗಳಲ್ಲಿ ಕಾಲುಂಗರವಿಲ್ಲದ್ದು ಕಂಡು ಸ್ವಲ್ಪ ನಿರಾಳನಾದೆ. ನಂತರ ನಾಗೇಶ್ ರವರೇ ಮಧೂವನ್ನೂ, ಅವರ ಮಡದಿಯನ್ನೂ ಹೊರಗೆ ಕರೆದು, ನಾನು ಅವರಿಗೆ ಏನೆಲ್ಲಾ ಹೇಳಿದ್ದೆನೋ ಅದನ್ನೆಲ್ಲಾ ಹೇಳಿ, ಮಧೂನ ಅಭಿಪ್ರಾಯಕ್ಕೆ ಕಾದು ಕುಳಿತವರಂತೆ ಅವಳೆಡೆಗೆ ತಿರುಗಿದರು! ಅವಳು ನನ್ನನ್ನು ಕಣ್ಣಿನಾಳದಿಂದ ನೋಡುವಂತೆ ಸೂಕ್ಷ್ಮವಾಗಿ ನೋಡಿ,

“ನಾನು ಇಂಥಹ ಸಾತ್ವಿಕ ಕುಟುಂಬದಲ್ಲಿ ಹುಟ್ಟಿ ನಿಮ್ಮಂಥ ಸಂಸ್ಕಾರವಂತ ತಂದೆ ತಾಯಿಗಳ ಆರೈಕೆಯಲ್ಲಿ ಬೆಳೆದಿದ್ದರ ಬಗ್ಗೆ ಹೆಮ್ಮೆ ಇದೆ. ನೀವು ನನಗೆ ಕೊಟ್ಟ ಸಂಸ್ಕಾರದಲ್ಲಿ ನಾನು ಗುರ್ತಿಸಿದ್ದು ’ಮನುಷ್ಯತ್ವ ಎಂಬುದು ಜಾತಿ, ಧರ್ಮ ಎಲ್ಲವುಗಳಿಗಿಂತಲೂ ದೊಡ್ಡದು’ ಎಂಬುದನ್ನೇ! ನಾನು ರಾಘುವನ್ನು ಪ್ರೀತಿಸುತ್ತೇನೆ, ನೀವು ಒಪ್ಪುವುದಾದರೆ ಅವನನ್ನು ಮದುವೆ ಆಗುತ್ತೇನೆ, ಆದರೆ ನನ್ನ ಎಮ್.ಟೆಕ್ ಪೂರ್ಣಗೊಂಡ ನಂತರವೇ!” ಎಂದಳು.

ನನಗೆ ಅಲ್ಲಿಯವರೆಗೆ ಅವಳು ಎಮ್.ಟೆಕ್ ಓದುತ್ತಿರುವುದೇ ಗೊತ್ತಿರಲಿಲ್ಲ! ನನಗೆ ಅವಳಲ್ಲಿ ನನ್ನ ಮೇಲಿದ್ದ ಪ್ರೀತಿಯನ್ನು ಕಂಡು ಹೆಮ್ಮೆ ಎನಿಸಿ ಅವಳನ್ನೇ ನೋಡುತ್ತಿದ್ದೆ! ಇತ್ತ ಮಧೂನ ಅಪ್ಪ ಅಮ್ಮನ ನಡುವೆ ಕಣ್ಸನ್ನೆಯ ಸಂವಹನ ನಡೆದಿತ್ತು! ಒಂದೈದು ನಿಮಿಷಗಳ ದೀರ್ಘ ಮೌನದ ನಂತರ ನಾಗೇಶ್ ರವರು,

“ನಮಗೂ ನಮ್ಮ ಮಗಳ ಸಂತೋಷವೇ ಮುಖ್ಯ. ನೀನು ಹಿರಿಯರಿಗೆ ಗೌರವ ಕೊಟ್ಟು ಒಂದೊಳ್ಳೇ ಕೆಲಸ ಹಿಡಿದ ನಂತರವೇ ಮದುವೆಯ ಬಗ್ಗೆ ನನ್ನೊಂದಿಗೆ ಪ್ರಸ್ಥಾಪಿಸಿದ್ದು ಹಿಡಿಸಿತು. ನೀನು ನಿಮ್ಮ ಅಪ್ಪಾ – ಅಮ್ಮನ ಒಪ್ಪಿಗೆಯನ್ನೂ ಪಡೆದುಕೋ, ಒಂದು ವರ್ಷದ ನಂತರ ನಿನ್ನ ಮತ್ತು ಮಧೂಳ ಮದುವೆಯನ್ನು ಮಾಡೋಣ” ಎಂದರು.

ನನಗೆ ಆಕಾಶಕ್ಕೆ ಎಷ್ಟೂ ಗೇಣುಗಳ ಅಂತರವೂ ಇಲ್ಲ ಎನಿಸಿತು. ಮಧೂನ ಕೈ ಹಿಡಿದು ಹಾರಿ ಕುಣಿಯಬೇಕು ಎನಿಸಿತು. ಮಗನ ಸಂತೋಷವನ್ನೇ ಬಯಸುವ ನನ್ನಪ್ಪ ಅಮ್ಮಾ ಸಂತೋಷದಿಂದ ನಮ್ಮ ಮದುವೆಗೆ ಒಪ್ಪಿಕೊಂಡರು! ಒಂದು ವರ್ಷದ ನಂತರ ನಮ್ಮ ಮದುವೆಯೂ ಆಯ್ತು, ಇನ್ನೊಂದು ವರ್ಷದೊಳಗೆ ನನ್ನ ಮುದ್ದು ಶಾರೀಯೂ ನಮ್ಮ ಕುಟುಂಬಕ್ಕೆ ಸೇರಿಕೊಂಡಳು! ನಮ್ಮ ಅಪ್ಪಾ ಅಮ್ಮನನ್ನು ಮಧೂ ತನ್ನ ತಂದೆ-ತಾಯಿಯರಂತೆ ನೋಡಿಕೊಳ್ಳುತ್ತಾಳೆ, ನನ್ನ ಮಾವ-ಅತ್ತೆಯನ್ನು ನಾನು ನನ್ನ ಅಪ್ಪ-ಅಮ್ಮನಂತೆಯೇ ಗೌರವಿಸುತ್ತೇನೆ! ಆಹಾರ ಪದ್ಧತಿಗಳು, ಜಾತಿಗಳು ಮತ್ತು ನಂಬಿಕೆಗಳು ಬೇರೆಬೇರೆಯಾಗಿದ್ದರೂ ನಮ್ಮದು ಸುಖೀ ಕುಟುಂಬ! ಹಳ್ಳ ಕೊಳ್ಳಗಳು, ಕೊರಕಲು ಕಲ್ಲುಗಳು, ಉದ್ದದ ಜಲಪಾತಗಳ ಮೇಲೆಲ್ಲ ಹರಿದ ತೊರೆಯಂಥ ನಮ್ಮ ಪ್ರೀತಿ ಈಗ ನಿರ್ಮಲ ಒಡಲನ್ನು ತಲುಪಿದೆ, ಒಂಬತ್ತು ವರ್ಷಗಳ ನಂತರವೂ ಹರಿಯುತ್ತಲೇ ಇದೆ, ನಮ್ಮೊಳಗಿನ ಅಂತರ್ಮುಖಿಯಾಗಿ!

ಈ ಫೆಬ್ರವರಿಯ ಹದಿನಾಲ್ಕರ ಪ್ರೇಮಿಗಳ ದಿನಕ್ಕೆ ನನ್ನ ಪುಟ್ಟ ಸಂಸಾರವನ್ನು ನಿಮಗೆ ಪರಿಚಯಿಸುತ್ತಿದ್ದೇನೆ! ನಾನು ರಾಘವ ಮಧುವಂತಿಯ ಪ್ರೇಮಿ, ಅವಳು ನನ್ನರ್ಧಾಂಗಿ ಮಧುವಂತಿ, ಇವಳು ನಮ್ಮಿಬ್ಬರ ಪ್ರೀತಿಯ ಬಿಂದು ಶಾರ್ವಾರಿ!

- ಪ್ರಸಾದ್.ಡಿ.ವಿ.

4 comments:

  1. :) very nice story.
    I am happy that it has ended with a happy note:)

    ReplyDelete
  2. nice..happy ending.
    Keep writing.

    ReplyDelete
  3. ವಾಹ್
    ತುಂಬಾನೇ ಖುಷೀ ಆಯ್ತು ನಿಮ್ಮ ಸಹಜ ಕಥೆ ಕೇಳಿ
    ನಗು ನಗುತಾ ಬಾಳಿ

    ReplyDelete
  4. Gud Prasad.. :)
    Wish ur story also will end like this.. :)
    All d best.. :)

    ReplyDelete