ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Tuesday 12 February 2013

ತೊರೆಯ ಮೇಲಿನ ಬದುಕು! - ೨

ಹಿಂದಿನ ಸಂಚಿಕೆ: ಬೆರಳಿಗೊಂದು ಉಂಗುರ, ಎದೆ ತುಂಬ ಪ್ರೀತಿ!




ನಮ್ಮದೂ ಒಂದು ಪ್ರೇಮ ಪ್ರಹಸನ!
---------------------------------------

ನನ್ನ ಕಾಲೇಜಿನ ದಿನಗಳವು, ಇಂಜಿನಿಯರಿಂಗ್ ಓದುತ್ತಿದ್ದ ರಾಘವನೆಂಬ ನಾನೂ, ನಮ್ಮ ಕಾಲೇಜಿನಲ್ಲಿ ಸಿವಿಲ್ ನಲ್ಲಿ ಓದುತ್ತಿದ್ದ ಮಧುವಂತಿಯೂ ಪ್ರೀತಿಯಲ್ಲಿ ಬಿದ್ದ ಬಗೆ ಹೀಗೆ! ಈ ಪ್ರೀತಿ ಹುಟ್ಟಿದ್ದು ಎಲ್ಲಿಂದ ಎಂದರೆ ನನಗೆ ಗೊತ್ತಿಲ್ಲ! ಅವಳು ಚಿನಕುರುಳಿ ಮಾತಿನ ಮಲ್ಲಿ, ನಾನು ಅಳೆದು ತೂಗಿ ಮಾತನಾಡುವ ವ್ಯಾಪಾರಿ! ಅವಳಾಗಿಯೇ ನನ್ನ ಹತ್ತಿರ ಬಂದಳೋ, ನಾನಾಗಿಯೇ ಅವಳ ಹತ್ತಿರ ಹೋದೆನೋ, ಗೊತ್ತಿಲ್ಲ! ನಾವೆಲ್ಲಾ ಮೊದಲ ವರ್ಷದ ಎರಡನೇ ಸೆಮ್ ನಲ್ಲಿ ಕಲಿಯುತ್ತಿರುವಾಗ ನಡೆಯುತ್ತಿದ್ದ ಕಾಲೇಜಿನ ಸಾಂಸ್ಕೃತಿಕ ಸಮಾರಂಭವೊಂದರ ನಿರೂಪಕಿಯಾಗಿದ್ದಳು ಮಧೂ, ಆದರೆ ಅವಳ ಸ್ಪೀಚ್ ಇನ್ನೂ ರೆಡಿ ಇರಲಿಲ್ಲ. ಮೊದಲಿಂದಲೂ ಒಂದಷ್ಟು ಗೀಚುವ ಗೀಳಿದ್ದ ನನಗೆ ಅವಳ ಸ್ಪೀಚ್ ಬರೆದುಕೊಡುವ ಜವಾಬ್ದಾರಿ ಕೊಡಲಾಯಿತು. ಅಲ್ಲಿಯವರೆಗೂ ಕೇವಲ ನೋಟಗಳಲ್ಲಿದ್ದ ನಮ್ಮ ಪರಿಚಯ ಮಾತಿನ ರೂಪ ಪಡೆಯಲು ಆ ಸಾಂಸ್ಕೃತಿಕ ಕಾರ್ಯಕ್ರಮ ಭೂಮಿಕೆಯಾಯಿತು. ಆ ಕಾರ್ಯಕ್ರಮದ ತನ್ನ ಹರಳು ಹುರಿದಂಥಾ ನಿರೂಪಣೆಯ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿಬಿಟ್ಟಳು ಮಧೂ! ಯಾರಾದರೂ ಅವಳನ್ನು ಆ ಬಗ್ಗೆ ಅಭಿನಂದಿಸಲು ಬಂದರೆ 'ರಾಘು ಇಲ್ಲದಿದ್ದರೆ ಇದೆಲ್ಲಾ ಸಾಧ್ಯವಾಗುತ್ತಿರಲಿಲ್ಲ ಎಂದು ನನ್ನನ್ನು ರೆಫರ್ ಮಾಡುತ್ತಿದ್ದಳಂತೆ!'. ನನ್ನ ಮನದಲ್ಲಾಗಲೇ ಸಣ್ಣಗೆ ಗಾಳಿ ಬೀಸಲು ಪ್ರಾರಂಭಿಸಿತ್ತು. ಆದರೆ ಪ್ರೀತಿ ಎಂದು ಹೆಸರಿಡುವಷ್ಟು ಒಡನಾಟವನ್ನು ಆಗಷ್ಟೇ ಪ್ರಾರಂಭಿಸಬೇಕಿತ್ತು! ಬಹಳ ಬೇಗನೇ ಆತ್ಮೀಯರಾದ ನಾವು, ಕಾಲೇಜಿನ ವಿರಾಮದ ಸಮಯಗಳಲ್ಲಿ ಲೋಕಾಭಿರಾಮರಾಗಿ ಕುಳಿತು ಹರಟುವುದು, ಅವಳು ಅವಳ ಸಿವಿಲ್ ವಿಷಯಗಳ ಬಗ್ಗೆ ಹೇಳುವುದು, ನಾನು ನನ್ನ ಎಲೆಕ್ಟ್ರಾನಿಕ್ಸ್ ವಿಷಯಗಳ ಬಗ್ಗೆ ಹೇಳುವುದು ಹೀಗೇ ಒಂದಷ್ಟು ಹರಟೆ ಹೊಡೆಯುವುದು! ಒಬ್ಬರಿಗೊಬ್ಬರ ಸಾನಿಧ್ಯ ಬೇಕಿತ್ತಷ್ಟೆ! ಆನಂತರದಲ್ಲಿ ನಾನೊಂಥರಾ ಎಲೆಕ್ಟ್ರಾನಿಕ್ಸ್ ಸಿವಿಲ್ ಇಂಜಿನಿಯರ್ರೂ, ಅವಳೊಂಥರಾ ಸಿವಿಲ್ ಎಲೆಕ್ಟ್ರಾನಿಕ್ಸ್ ಇಂಜಿನಿಯರ್ರೂ ಆಗಿಬಿಟ್ಟೆವು!

ಹೀಗೆ ಸ್ನೇಹವಾಗಿ ಕುಡಿಯೊಡೆದು ಆತ್ಮೀಯತೆಯಾಗಿದ್ದ ನಮ್ಮ ಸಂಬಂಧ ಎರಡನೇ ವರ್ಷದ ಆರಂಭದ ದಿನಗಳಲ್ಲೇ ಪ್ರೀತಿಯಾಗಿ ಬದಲಾಗಿತ್ತು. ಒಬ್ಬರಿಗೊಬ್ಬರು ನಿವೇಧಿಸದೇ ಪ್ರೀತಿಸಲು ಪ್ರಾರಂಭಿಸಿದ್ದೆವು. ಅದು ಪ್ರೀತಿಯೆಂದು ಇಬ್ಬರಿಗೂ ಗೊತ್ತಿತ್ತು! ನಾನೇ ಆ ಬಗ್ಗೆ ಮೌನ ಮುರಿದು 'ನಾನು ಅವಳನ್ನು ಪ್ರೀತಿಸುವುದಾಗಿ ಹೇಳಿದೆ' ಹೆಸರಿಲ್ಲದೆ ನಡೆದಿದ್ದ ಪ್ರೀತಿ ಆಗ ಅಧಿಕೃತವಾಗಿ ಹೆಸರು ಪಡೆದಿತ್ತು.  ಹೀಗೆ ನಮ್ಮ ಮೊದಲ ಮದುವೆ ಓದುವಾಗಲೇ ನಡೆದು ಹೋಯ್ತು!

ನಮ್ಮದು ಎಲ್ಲರಂತೆ ಪಾರ್ಕು, ಸಿನೆಮಾ, ಔಟಿಂಗ್ ಎಂದು ತೋರಿಕೆಗೆ ಸುತ್ತುವ ಪ್ರೀತಿಯಲ್ಲ! ಅವಳು ಮೇಲೆ ನೋಡಲು ಫಾಸ್ಟ್ ಫಾರ್ವರ್ಡ್ ಹುಡುಗಿಯಂತೆ ಕಂಡರೂ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಿಂದ ಬಂದವಳು, ನಾನು ಒಕ್ಕಲುತನವನ್ನೇ ವೃತ್ತಿಯಾಗಿಸಿಕೊಂಡಿರುವ ಗೌಡರ ಮನೆ ಹುಡುಗ! ಅವಳಿಗೆ ಸಂಪ್ರದಾಯಗಳು ಮೈಗೂಡಿದ್ದರೆ, ನನಗೆ ಕಷ್ಟಗಳ ಅರಿವಿತ್ತು! ಆದ್ದರಿಂದ ಈ ಆಡಂಬರದ ಪ್ರೀತಿಯ ತೋರಿಕೆಯಲ್ಲಿ ನಮಗೆ ಸ್ವಲ್ಪವೂ ನಂಬಿಕೆಯಿರಲಿಲ್ಲ!

ನಮ್ಮ ಪ್ರೀತಿ ಎಂದೂ ನಮ್ಮ ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ ಬೀರಲು ಬಿಡುತ್ತಿರಲಿಲ್ಲ. ಒಬ್ಬರಿಗೆ ಮತ್ತೊಬ್ಬರ ಸಾನಿಧ್ಯ ಬೇಕೆಂದಾದಾಗ ಹೇಗಾದರೂ ಸಮಯ ಮಾಡಿಕೊಂಡೇ ಮಾಡಿಕೊಳ್ಳುತ್ತಿದ್ದೆವು. ಇದು ನಮ್ಮ ನಡುವಿದ್ದ ಅಲಿಖಿತ ನಿಯಮ! ಹೀಗೆ ಸುಂದರವಾಗಿ ಸಾಗಿದ್ದ ನಮ್ಮ ಪ್ರೀತಿಯ ನಡುವೆ ಫೈನಲ್ ಇಯರ್ ನ ಪ್ರಾಜೆಕ್ಟುಗಳು, ಸೆಮಿನಾರುಗಳು ಮತ್ತು ಪ್ಲೇಸ್ಮೆಂಟುಗಳ ಭರಾಟೆ ಶುರುವಾಗಿತ್ತು! ಎಷ್ಟೇ ಒತ್ತಡಗಳಿದ್ದರೂ ನಮ್ಮ ಭೇಟಿಗಳ ಸಂಖ್ಯೆ ಕಡಿಮೆಯಾಗಿದ್ದರೂ ನಮ್ಮ ಪ್ರೀತಿ ಮಾತ್ರ ಒಂದಿಂಚೂ ಕಳೆಗುಂದಿರಲಿಲ್ಲ, ಕಳೆಗುಂದಲು ಸಾಧ್ಯವೂ ಇರಲಿಲ್ಲ! ಹೀಗೆ ನಡೆದಿದ್ದ ಸಮಯದಲ್ಲಿ ನಮ್ಮ ಪ್ರೀತಿಯ ಎರಡನೇ ವರ್ಷಾಚರಣೆಗೆ ಅವಳಿಗೊಂದು ಗಿಫ್ಟ್ ಪ್ಯಾಕ್ ಮಾಡಿಸಿದವನೇ, ಅವಳ ಮನೆಗೇ ಕೊರಿಯರ್ ಮಾಡಿಬಿಟ್ಟೆ! ಹಾಗೆ ನಾನು ಮಾಡಿದ್ದೇಕೆ ಎಂದು ಈಗಲೂ ನನಗೆ ಅರ್ಥವಾಗುತ್ತಿಲ್ಲ. ನನ್ನ ದುರಾದೃಷ್ಟಕ್ಕೆ ಅದು ಅವರಪ್ಪನ ಕೈಯ್ಯಲ್ಲೇ ಸಿಕ್ಕಿ ಹೋಯ್ತು! ನಾನು ಹಿಂದೆ ಒಂದೆರಡು ಬಾರಿ ಅವರ ಮನೆಗೆ ಹೋಗಿದ್ದರಿಂದ ಅವರಿಗೆ ಆ ಗಿಫ್ಟ್ ಪ್ಯಾಕ್ ಕಳುಹಿಸಿರುವ ರಾಘು ನಾನೇ ಎಂಬುದು ಗೊತ್ತಾಗಿ ಹೋಗಿತ್ತು. ಅವಳಪ್ಪನಿಗೆ ಮಧೂವನ್ನು ನೋಯಿಸುವುದು ಬೇಕಿರಲಿಲ್ಲ ಅದಕ್ಕೆ ಉಪಾಯವಾಗಿ ನನ್ನ ಮೊಬೈಲ್ ನಂಬರ್ ತೆಗೆದುಕೊಂಡವರೇ, ಕರೆ ಮಾಡಿದರು,

"ಹಲೋ ನಾನು ಮಧುವಂತಿಯ ಅಪ್ಪ ಮಾತನಾಡುತ್ತಿರುವುದು..." ಎಂದರು.

ನಾನು ಗಾಬರಿಯಾದರೂ ತೋರಗೊಡದೆ, "ಹಲೋ, ಹೇಳಿ ಅಂಕಲ್" ಎಂದೆ.

"ನಾನು ನೇರವಾಗಿ ವಿಷಯಕ್ಕೆ ಬರುತ್ತೇನೆ. ಮಕ್ಕಳು ಓದುವಾಗ ಓದಬೇಕು, ಆಡುವಾಗ ಆಡಬೇಕು, ಪ್ರೀತಿ ಮಾಡುವಾಗ ಪ್ರೀತಿ ಮಾಡಬೇಕು! ಮೊದಲು ನಿನ್ನ ಕಾಲ ಮೇಲೆ ನೀನು ನಿಲ್ಲು ಆನಂತರದಲ್ಲಿ ಈ ಪ್ರೀತಿ ಪ್ರೇಮವೆಲ್ಲಾ ಇದ್ದರೆ ಸಾಕು..." ಎಂದು ಒಂದೇ ಉಸುರಿನಲ್ಲಿ ಹೇಳಿ ಮುಗಿಸಿ ಫೋನ್ ಕೆಳಗಿಟ್ಟರು.

ನಾನು ಭಯದಿಂದ ತರ ತರ ನಡುಗುತ್ತಿದ್ದೆ. ಪರಿಣಾಮಗಳ ಅರಿವಿಲ್ಲದೆ ಪ್ರೀತಿ ಮಾಡಿದರೆ ಆಗುವ ಅವಾಂತರಗಳಿಗೆ ನಾನೇ ಉದಾಹರಣೆಯಾಗಿದ್ದೆ. ಮಧೂನ ಅಪ್ಪ ಹೇಳಿದ 'ಮೊದಲು ನಿನ್ನ ಕಾಲಮೇಲೆ ನೀನು ನಿಲ್ಲು' ಎಂಬ ಮಾತು ಮಾತ್ರ ಮನಕ್ಕೆ ನಾಟಿಬಿಟ್ಟಿತ್ತು. ಆ ತಕ್ಷಣವೇ ನಾನು ನನ್ನ ಕಾಲ ಮೇಲೆ ನಿಲ್ಲುವವರೆಗೂ ಮಧುವಂತಿಯೊಂದಿಗಿನ ಒಡನಾಟ ಬೇಡ ಎಂಬ ತೀರ್ಮಾನಕ್ಕೆ ಬಂದುಬಿಟ್ಟೆ!

ಆನಂತರದಲ್ಲಿ ನಾನು ಪಟ್ಟ ಪರಿಪಾಟಲುಗಳಿಗೆ ಲೆಕ್ಕವಿಲ್ಲ. ಮೊದ ಮೊದಲು ಕರೆಗಳು, ಸಂದೇಶಗಳಿಲ್ಲದೆ ಕಡಿತಗೊಳ್ಳಲಾರಂಭಿಸಿದ ನಮ್ಮ ಮಾತುಕತೆ, ಎದುರಿಗೆ ಸಿಕ್ಕರೂ ಅಪರಿಚಿತರಂತೆ ಸಾಗುವಲ್ಲಿಗೆ ಬಂತು! ನಾನು ಮಾತಾಡಿಸುತ್ತೇನೆ ಎಂದು ನನ್ನೆಡೆಗೆ ನೋಡುತ್ತಿದ್ದ ಆ ಮುದ್ದು ಕಣ್ಣುಗಳ ದೃಷ್ಟಿಯನ್ನು ಎದುರಿಸಲಾಗದೆ ಕಣ್ತಪ್ಪಿಸಲು ಪ್ರಯತ್ನಿಸುತ್ತಿದ್ದೆ! ಮೊದಲು ಒಂದು ಒಳ್ಳೆಯ ಕಂಪೆನಿಯಲ್ಲಿ ಕೆಲಸ ಹಿಡಿಯಬೇಕು ಎಂಬುದು ನನ್ನ ಮೂಲ ಮಂತ್ರವಾಯಿತು. ಅವಳ ಸಾನಿಧ್ಯ ಬೇಕೆಂದು ರಚ್ಚೆ ಹಿಡಿಯುತ್ತಿದ್ದ ಎದೆಗಣ್ಣುಗಳಿಗೆ ಸಾಂತ್ವನ ಹೇಳುತ್ತಿದ್ದೆ, ಆದರೆ ಅವುಗಳು ಮಾತ್ರ ನನ್ನ ಮಾತು ಕೇಳುತ್ತಿರಲಿಲ್ಲ, ಅಳುವುದನ್ನು ನಿಲ್ಲಿಸುತ್ತಿರಲಿಲ್ಲ!

ಅವಳ ಕೃಷ್ಣನ ಕೃಪೆಯೋ, ನನ್ನ ಪರಿಶ್ರಮದ ಫಲವೋ 'ಎಕ್ಸಲೆಂಟ್ ಎಲೆಕ್ಟ್ರಾನಿಕ್ಸ್' ಎಂಬ ಒಂದೊಳ್ಳೇ ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿಕೊಂಡೆ. ಇನ್ನು ಇಂಜಿನಿಯರಿಂಗ್ ಮುಗಿಸಿ ಮೊದಲೆರಡು ತಿಂಗಳ ಸಂಬಳ ಕೈಗೆ ಬಂದ ಮೇಲೆ ಮಧುವಂತಿಯನ್ನು ಮಾತನಾಡಿಸುವುದೆಂದು ತೀರ್ಮಾನಿಸಿಕೊಂಡೆ. ಅಷ್ಟರಲ್ಲಾಗಲೇ ಪ್ರಾಜೆಕ್ಟ್ ಸಬ್ಮಿಷನ್, ಸೆಮಿನಾರ್ ಕಂಡಕ್ಷನ್ ಮತ್ತು ಫೇರ್ವೆಲ್ ಗಳ ಮಧ್ಯೆ ಇಂಜಿನಿಯರಿಂಗ್ ಮುಗಿದೇ ಹೋಯಿತು! ನಾನು ಮಾತ್ರ ಆಫರ್ ಲೆಟರ್ ಗಾಗಿ ಕಾದು ಕುಳಿತೆ, ಜಾತಕ ಪಕ್ಷಿಯ ಹಾಗೆ!

ದುಡಿಯಲು ಪ್ರಾರಂಭಿಸುವ ಮಗನ ಮೇಲೆ ತಂದೆ ತಾಯಿಗಳಿಗೆ ಒಂದಷ್ಟು ನಿರೀಕ್ಷೆಗಳು ಇದ್ದೇ ಇರುತ್ತವೆ! ಆ ನಿರೀಕ್ಷೆಗಳನ್ನು ಪೂರೈಸಲೇಬೇಕಾದ ಜವಾಬ್ದಾರಿ ನನ್ನ ಮೇಲೂ ಇತ್ತು. ಮೊದಲು ಪದವಿ ಮುಗಿಸಿದ್ದ ನನ್ನ ತಂಗಿಯ ಮದುವೆ ಮಾಡಬೇಕಿತ್ತು, ಅಪ್ಪ, ತಮ್ಮ ಜವಾಬ್ದಾರಿಗಳನ್ನು ಕಳಚಿ ನಿರಾಳರಾಗಿ, ಅಮ್ಮನೂ ಸಂತೋಷವಾಗಿ ಬದುಕುವುದನ್ನು ನೋಡಬೇಕಿತ್ತು. ಇಷ್ಟೆಲ್ಲಾ ಜವಾಬ್ದಾರಿಗಳನ್ನು ಪೂರೈಸಿ ಮನೆಯನ್ನು ದಡ ಮುಟ್ಟಿಸುವುದರೊಳಗೆ ಒಂದು ವರ್ಷವೇ ಕಳೆದು ಹೋಯಿತು! ನಾನು ಮಧುವಂತಿಯೊಂದಿಗೆ ಮಾತಾಡುವುದನ್ನು ಬಿಟ್ಟು ಬರೋಬ್ಬರಿ ಎರಡು ವರ್ಷಗಳು ಕಳೆದು ಹೋಗಿದ್ದವು. ಕಣ್ಣೊಳಗೆ ಕಂಡ ಪ್ರೀತಿ ಒಡೆಯುವುದು ಬೇಕಿಲ್ಲದ ನಾನು, ಎರಡು ವರ್ಷಗಳಲ್ಲಿ ಕಂಡೂ ಕಾಣದಂತೆ ಬಚ್ಚಿಟ್ಟಿದ್ದ ನನ್ನ ಮೊಬೈಲ್ ನೊಳಗಿನ 'ಮಧೂ' ಎಂಬ ಹೆಸರಿನ ನಂಬರಿಗೆ ಕರೆಯ ಗುಂಡಿ ಒತ್ತಿದೆ. ಅದು 'ಔಟ್ ಆಫ್ ಆರ್ಡರ್' ಎಂದು ಬಂದುಬಿಡುವುದೇ! ಸರಿ ಅವಳ ಮನೆಯ ಅಡ್ರೆಸ್ ಹೇಗೋ ಇತ್ತಲ್ಲ, ಹೊರಟೆ ಮೈಸೂರಿಗೆ! ಅವರ ಮನೆಯನ್ನು ಪತ್ತೆ ಹಚ್ಚಿದವನೇ ನಿರಾಳತೆಯ ಉಸಿರುಬಿಡುವುದರೊಳಗೆ ಅವರಪ್ಪನಿಗೆ ವರ್ಗವಾಗಿ ಮನೆಯವರ ಸಮೇತ ಬೇರೆ ಊರಿಗೆ ಹೊರಟುಹೋಗಿದ್ದರು ಎಂಬುದು ತಿಳಿಯಿತು!

ಮುಂದಿನ ಸಂಚಿಕೆ: ಒಡಲು ಸೇರಿದ ತೊರೆ!

4 comments:

  1. ಮುಂದಾ..?
    ಮಧುವಂತೀ ಪ್ರೇಮ...?

    ReplyDelete
  2. ತುಂಬಾ ಭಾವುಕ ಬರಹ. ನೆಚ್ಚಿಗೆಯಾಯ್ತು.

    ReplyDelete
  3. ಮೊದಲಬಾರಿಗೆ ನಿಮ್ಮ ಬ್ಲಾಗ್ ಓದಿದ್ದು
    ಬರಹ ಚೆನ್ನಾಗಿದೆ, ಬರೆಯುತ್ತಿರಿ

    ReplyDelete