ಮಂಜಿನ ಹನಿಯಲ್ಲಿ ಒಮ್ಮೆ ಮಿಂದು ಹೋದುವರು

Thursday 10 January 2013

ಉಸಿರಾಡಲಿ ತಾಯಿ ಭಾರತಿ!




ಕಾಡವೇ ಕಂದಾಚಾರಗಳು,
ಅವುಗಳ ಪಾಡಿಗವು ಕುಣಿಯವೇ,
ಕಾಂಚಾಣಕ್ಕೆ ಹೂಂಕರಿಸಿ
ಕುಣಿವ ದೈತ್ಯ ದೇವತೆಯಂತೆ!
ಕುಣಿದದ್ದೆ ಕುಣಿದದ್ದು,
ಉಂಡೆಲೆಯ ಮೇಲೂ
ಹೊರಳಿ ಬಿದ್ದವು ಮೌಲ್ಯಗಳು!
ಅಂಧಾಚರಣೆಯ ಹೆಸರಲ್ಲಿ
ಮೆತ್ತಿಕೊಂಡವು ಮೈಗೆ,
ಕಂಡಕಂಡವರ ಎಂಜಲಗಳು!
ಕಂದಾಚಾರ, ಡಂಬಾಚಾರಗಳು
ಗಂಟು ಬಿಡಲಿಲ್ಲ, ನಂಟೂ ಬಿಡಲಿಲ್ಲ!

ದೇವರಿಗೆ ಹಚ್ಚಿಟ್ಟ
ಧೀ ಶಕ್ತಿ ತೂಗು ದೀಪ,
ಮನೆ ಸುಟ್ಟ ಕೊಳ್ಳಿಯಾಯ್ತಂತೆ!
ಉರಿಸಿಟ್ಟ ಊದುಗಡ್ಡಿಯ ಹೊಗೆ
ಸಿಗರೇಟಿನ ಸುರುಳಿ ಸುತ್ತಿದ
ಧೂಮದೊಳು ಬೆರೆತಂತೆ!
ತಾಯಿಯೂ ಮಕ್ಕಳ
ಮಾನ ಕಾಯಲಾರದೆ
ಕೈ ಕಟ್ಟಿ ಕೂತಂತೆ!
ಬೆತ್ತಲಾದವು ಹೆಣ್ಮಕ್ಕಳು
ಹಾದಿ ಬೀದಿಯಲ್ಲಿ,
ಅವರವರನುಜರ ಕೈಯ್ಯಲ್ಲೇ!

ಸಮಾನತೆ ಕುಡಿಯೊಡೆಯಲಿಲ್ಲ,
ಸಾತ್ವಿಕತೆ ಮೊಲೆಯೂಡಲಿಲ್ಲ,
ತಾಯಿ ಅಳುತ್ತಲೇ ಇದ್ದಾಳೆ,
ಸೀರೆಯೆಳೆದಾರು
ಹೊಲಸು ಕೆಡುಕರು
ಎಂಬ ಭಯದಲ್ಲಿ!
ಮುಕ್ತವಾಗಿಸಿರೋ ಅವಳ
ಕಬಂದ ಬಾಹುಗಳ
ಕಪಿ ಮುಷ್ಠಿಯಿಂದ!
ಸಮಾನತೆ, ಸ್ವಸ್ಥ ಗಾಳಿಯ
ಉಸಿರಾಡಲಿ ಭಾರತಾಂಬೆ,
ಕಾಣದೇ ಅವಳ ದಣಿವು ನಿಮಗೆ?

- ಪ್ರಸಾದ್.ಡಿ.ವಿ.

ಚಿತ್ರ ಕೃಪೆ: ಅಂತರ್ಜಾಲ

No comments:

Post a Comment